ಪುತ್ತೂರು: ಅಡಿಕೆ ಲಕ್ಷಾಂತರ ಜನರ ಜೀವನಾಧಾರವಾಗಿದ್ದು ಅದನ್ನು ಒಂದು ವೇಳೆ ನಿಷೇಧ ಮಾಡಿದಲ್ಲಿ ರೈತರ ಬದುಕು ಬೀದಿಪಾಲಾಗಲಿದೆ. ಸರ್ಕಾರಿ ನೌಕರರಿಗೆ ವೇತನ ಆಯೋಗವಿರುವಂತೆ ರೈತರಿಗೂ ವೇತನ ಆಯೋಗ ರಚನೆ ಮಾಡಬೇಕು ಎಂದು ರೈತ ಸಂಘದ ಮುಖಂಡರಾದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಲ್ಲಿನ ಕಲ್ಲಾರೆಯಲ್ಲಿರುವ ಜಿಲ್ಲಾ ಘಟಕ ಕಚೇರಿಯಲ್ಲಿ ಶುಕ್ರವಾರ ನಡೆದ ಅಡಿಕೆ ಬೆಳೆಗಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಿಗೆ ಅತ್ಯುನ್ನತ ಮಹತ್ವ ನೀಡುತ್ತಿರುವ ಸರ್ಕಾರ ನಮ್ಮ ದೇಶದಕೃಷಿ ಉತ್ಪನ್ನಗಳ ಬಗ್ಗೆಯಾಗಲಿ, ಕೃಷಿ ಉತ್ಪಾದನೆಯ ವಿಧಾನಗಳ ಬಗ್ಗೆಯಾಗಲೀ ಮಹತ್ವ ನೀಡದಿರುವುದು ಮತ್ತು ಸಣ್ಣ ಕೈಪಿಡಿಯನ್ನು ಕೂಡ ಹೊರಡಿಸುವುದು ದುರದೃಷ್ಟಕರ ಎಂದರು.
ಕಾಸರಗೋಡು ಅಡಿಕೆ ಬೆಳೆಗಾರರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ರಾವ್ ಕಲ್ಲಗ ಮಾತನಾಡಿ, ಯಾರೋ ಕೆಲವರು ಎ.ಸಿ ರೂಂನಲ್ಲಿ ಕುಳಿತು ಅಡಿಕೆಯ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ ರೈತರನ್ನು ಕಂಗೆಡಿಸುವ ಬದಲು ವಾಸ್ತವ ಸತ್ಯವನ್ನು ಅರಿತುಕೊಂಡು ಹೇಳಿಕೆ ನೀಡಬೇಕು ಎಂದರು.
ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟ್ರಮಣ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಹಾಗೂ ಮಂತ್ರಿಗಳು ಜಡತ್ವ ಹಿಡಿದವರಾಗಿದ್ದು ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಅವರೆಲ್ಲರನ್ನು ಎಚ್ಚರಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ರೈತ ಸಂಘದ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ರವಿಕಿರಣ್ ಪುಣಚ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಮಡಿಕೇರಿ ತಾಲ್ಲೂಕು ಸಂಚಾಲ ಶ್ರೀನಿವಾಸ ನಿಡಿಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸುಳ್ಯ ತಾಲ್ಲೂಕು ಸಂಚಾಲಕ ಎಂ.ಡಿ ವಿಜಯಕುಮಾರ್, ಕಿಸಾನ್ ಸೇನೆಯ ತಾಲ್ಲೂಕು ಕಾರ್ಯದರ್ಶಿ ಗೋವಿಂದ ಭಟ್, ಹಾಸನ ಜಿಲ್ಲಾಧ್ಯಕ್ಷ ಕಣಗಲ್ ಮೂರ್ತಿ, ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ರೈ ಇದ್ದರು.