ವಿದ್ಯಾಗಿರಿ (ಮೂಡುಬಿದಿರೆ): ಜನಪದ ಸಂಸ್ಕೃತಿಯನ್ನ ಒಳಗೊಂಡ ಕವಿತೆ, ಕತೆ ಇಲ್ಲವೆ ಕುಣಿತಗಳು ತನ್ನದೇ ಆದ ಒಂದು ರೀತಿಯ ವಿಶೇಷ ಸ್ಥಾನಮಾನವನ್ನು ಪುರಾತನ ಕಾಲದಿಂದಲೂ ಹೊಂದಿವೆ. ಆದರೂ ಈ ಕಲೆ ಇನ್ನೂ ಒಂದು ವರ್ಗಕ್ಕೆ ಎಂಬಂತೆ ಸೀಮಿತವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅಭಯ್ ಕುಮಾರ್ ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ರ ಸಮ್ಮೇಳನದ ನಾಡೋಜ ಎಚ್,ಎಲ್ ನಾಗೇಗೌಡ ವೇದಿಕೆಯಲ್ಲಿ ಶುಕ್ರವಾರ ನಡೆದ ’ಕರಾವಳಿಯ ಜನಪದ ಕುಣಿತಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಜನಪದ ಕವಿತೆಗಳು ತನ್ನದೇ ಆದಂತಹ ಸೊಗಡನ್ನು ಹೊಂದಿವೆ. ಈ ಹಾಡುಗಳು ಹೆಚ್ಚಾಗಿ ಕರಾವಳಿ ಭಾಗದ ಗ್ರಾಮಾಂತರ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗದವರಲ್ಲಿ ಕಾಣ ಸಿಗುತ್ತವೆ. ಈ ವರ್ಗದ ಜನ ಕೃಷಿ, ಕಾರ್ಯದಲ್ಲಿ ತೊಡಗಿರುವಾಗ, ಹಬ್ಬ ಹರಿದಿನ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಜನಪದ ಹಾಡು, ನತ್ಯಕ್ಕೆ ಆದ್ಯತೆ ನೀಡುತ್ತಾರೆ.ಜನಪದ ಆಚರಣೆಗಳು ಈ ವರ್ಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಕಲೆಯನ್ನು ಮೇಲ್ವರ್ಗದವರು ಆಚರಣೆ ಮಾಡುತ್ತಿಲ್ಲ.
ಇದನ್ನು ಎಲ್ಲ ವರ್ಗದವರು ಆಚರಣೆಯಾಗುವಂತಾಗಬೇಕು. ದೇವಸ್ಥಾನ, ಸಾರ್ವಜನಿಕ ಹಬ್ಬ ಹರಿದಿನಗಳಲ್ಲಿ ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಾಗ ಈ ಕಲೆ ಹೆಚ್ಚು ವಿಸ್ತಾರವಾಗಿ ಬೆಳೆದು ಜನಪ್ರಿಯತೆಯನ್ನು ಪಡಕೊಳ್ಳುತ್ತದೆ ಎಂದರು. ಯದುಪತಿ ಗೌಡ ಪ್ರಾತ್ಯಕ್ಷಿಕೆ ವಿವರಣೆ ನೀಡಿದರು.