ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಅವರು, ಜಾತ್ಯತೀತ ಪಕ್ಷಗಳು ಮಮತಾ ಬ್ಯಾನರ್ಜಿ ಅವರನ್ನು ಜಾತ್ಯತೀತ ನಾಯಕಿ ಎಂದು ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ ಎಲ್ಲ ಜಾತ್ಯತೀತ ಪಕ್ಷಗಳು ಒಗ್ಗೂಡಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುವ ಮೂಲಕ ಅವರನ್ನು ಜಾತ್ಯತೀತ ಪಕ್ಷಗಳ ನಾಯಕರೆಂದು ಒಪ್ಪಿಕೊಳ್ಳಬೇಕಿದೆ.
ಯುಪಿಎ ಅಧಿಕಾರ ಹಿಡಿಯುವುದು ಬಹುತೇಕ ಕಷ್ಟ ಎಂದಿರುವ ಅವರು ಎಲ್ಲ ಜಾತ್ಯತೀತ ಶಕ್ತಿಗಳು ಮೋದಿಗೆ ಪ್ರಧಾನಿ ಹುದ್ದೆಯನ್ನು ತಪ್ಪಿಸಬೇಕು. ಮಮತಾ ಬ್ಯಾನರ್ಜಿ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕಾಂಗ್ರೆಸ್ ಅಂತರ
ರಶೀದ್ ಅಲ್ವಿ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಕ ಅಭಿಪ್ರಾಯ. ಫಲಿತಾಂಶ ಘೋಷಣೆಗೆ ಮುನ್ನ ಇಂತಹ ಯಾವುದೇ ನಿರ್ಧಾರವನ್ನು ಪಕ್ಷ ತಿರಸ್ಕರಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.