ರಾಣೆಬೆನ್ನೂರು: ‘ನಮ್ಮಲ್ಲಿರುವ ಸಂಪನ್ಮೂಲಗಳಿಗೆ ಹೊಸ ತಾಂತ್ರಿಕ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಪ್ರಯೋಗಗಳನ್ನು ಮಾಡಬೇಕು’ ಎಂದು ಜೇಸಿಐ ಅಧ್ಯಕ್ಷ ಪಿ.ಸಿ.ಹಲಗೇರಿ ಹೇಳಿದರು.
ತಾಲ್ಲೂಕಿನ ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಣೆಬೆನ್ನೂರು ಜೇಸಿಐ ಆಶ್ರಯದಲ್ಲಿ ಏಪರ್ಡಿಸಿದ್ದ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ಪವಾಡ ಬಯಲು ರಹಸ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತ್ಯಕ್ಷವಾಗಿ ಕಂಡು ಪ್ರಮಾಣಿಸಿ ನೋಡು ಎನ್ನುವ ತತ್ವವನ್ನು ಅನುಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪವಾಡಗಳ ಹಿಂದೆ ಇರುವ ತಂತ್ರಗಳನ್ನು ಸೂಕ್ಮವಾಗಿ ಗಮನಿಸಬೇಕು, ಮೂಢ ನಂಬಿಕೆಗಳಿಗೆ ಸಾವರ್ಜನಿಕರು ಬಲಿಯಾಗದಂತೆ ಎಚ್ಚರವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ರುಸ್ತುಂ ನಂದೀಹಳ್ಳಿ ಅವರು ವಿದ್ಯಾರ್ಥಿಗಳಿಗೆ ಅನೇಕ ಪವಾಡಗಳನ್ನು ಮಾಡಿ ತೋರಿಸುವ ಮೂಲಕ ಪವಾಡದ ಹಿಂದೆ ಇರುವ ತಂತ್ರಗಳನ್ನು ತೋರಿಸಿಕೊಟ್ಟರು. ಜಾನಪದ ಹಾಡುಗಳನ್ನು ಹೇಳುವ ಮೂಲಕ ಜಾನಪದ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
ಜೇಸಿಐ ಹಾವೇರಿ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಅವರು ವಿವಿಧ ಚಟುವಟಿಕೆಗಳನ್ನು ಮಾಡಿ ತೋರಿಸಿದರು. ಪ್ರಾಚಾರ್ಯ ವಾಗೀಶ ಉದಾಸಿಮಠ ಅವರು ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಿಜ್ಞಾನ ಸಂಘದ ಅಡಿಯಲ್ಲಿ ಹೆಚ್ಚಿನ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಜಯಣ್ಣ ಕರಡೇರ, ಶಾಲಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಶ್ವೇತಾ ರಡ್ಡೇರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.