ಬಾಗಲಕೋಟೆ: ‘ಭಾರತೀಯ ಶಿಕ್ಷಣ ಅಮೆರಿಕಾ ನಿರ್ಮಾಣಕ್ಕೆ ಸಹಾಯಕವಾಗುತ್ತಿದೆಯೇ ಹೊರತು ಭಾರತಕ್ಕೆ ಪ್ರಯೋಜನವಾಗುತ್ತಿಲ್ಲ, ದೇಶ ಕಟ್ಟಲು ಅನುಕೂಲವಾಗುವಂತ ದೇಶೀಯ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಯುವ ಜನತೆ ದೇಶದಲ್ಲೇ ಉಳಿಯುವಂತೆ ಮಾಡಬೇಕಿದೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಹೇಳಿದರು.
ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿಜ್ಞಾನ ಮಹಾವಿದ್ಯಾಲಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಪಾಶ್ಚಿಮಾತ್ಯ ದೇಶಕ್ಕಿಂತ ಉತ್ಕೃಷ್ಟ ಜ್ಞಾನ, ಪ್ರತಿಭೆ, ನೈಪುಣ್ಯ, ಕೌಶಲ ಹೊಂದಿರುವ ಭಾರತೀಯರು ಕೀಳರಿಮೆ ತೊರೆಯಬೇಕು, ಇಂಗ್ಲಿಷ್ಗಿಂತ ಕನ್ನಡ ಭಾಷೆಗೆ ಹೆಚ್ಚಿನ ಪ್ರತಿಷ್ಠೆ ಇದೆ ಎಂಬುದನ್ನು ಮರೆಯಬಾರದು’ ಎಂದರು.
‘ಜಾನಪದವನ್ನು ಲಘುವಾಗಿ ಪರಿಗಣಿಸಬಾರದು, ಜಾನಪದದಲ್ಲಿ ಜೀವನದ ಸತ್ವ ಅಡಗಿದೆ, ಜಾನಪದ ಬದುಕಿನ ಮೌಲ್ಯವನ್ನು ಒಳಗೊಂಡಿದೆ’ ಎಂದು ಹೇಳಿದರು. ‘ಜಾನಪದ ನಾಟಕವಾದ ‘ಸಂಗ್ಯಾಬಾಳ್ಯ’ ಬ್ರಿಟಿಷ್ ಸರ್ಕಾರವನ್ನೇ ನಡುಗಿಸಿತು, ಹೆದರಿದ ಬಿ್ರಟಿಷ್ ಸರ್ಕಾರ ನಾಟಕ ಪ್ರದರ್ಶನವನ್ನೇ ರದ್ದುಗೊಳಿಸಿತು. ಆದರೂ ನಮ್ಮ ಜನಪದರು ನಾಟಕವನ್ನು ಕದ್ದುಮುಚ್ಚಿ ಆಡುತ್ತಿದ್ದರು’ ಎಂದರು.
‘ಜನ ಜೀವನಕ್ಕೆ ಉಪಯುಕ್ತವಾಗುವಂತಹ ಸಾಹಿತ್ಯ ಹುಟ್ಟಬೇಕು’ ಎಂದು ಕಂಬಾರ ಹೇಳಿದರು. ‘ಒಂದು ಶತಮಾನದಿಂದ ಅರ್ಧ ಕರ್ನಾಟಕಕ್ಕೆ ಶಿಕ್ಷಣವನ್ನು ನೀಡುತ್ತಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸೇವಾ ಕಾರ್ಯ ಶ್ಲಾಘನೀಯ’ ಎಂದರು.
ಅಭಿನಂದನಾ ಭಾಷಣ ಮಾಡಿದ ಸಾಹಿತಿ ಡಾ.ಮನು ಬಳಿಗಾರ, ‘ಯಾವುದೇ ಪಂಥಕ್ಕೆ ಸೇರದೇ ಸಾಹಿತ್ಯದ ಮೂಲಕ ಅನ್ಯಾಯವನ್ನು ಪ್ರತಿಭಟಿಸುವ ಮೂಲಕ, ನೊಂದವರ ಮತ್ತು ತುಳಿತಕ್ಕೆ ಒಳಗಾದವರ ಧ್ವನಿಯಾದ ಕಂಬಾರ ಅವರು ಕೇವಲ ಜಾನಪದ ಸಾಹಿತಿಯಲ್ಲ, ಬಂಡಾಯ ಸಾಹಿತಿಯೂ ಹೌದು’ ಎಂದು ವಿಶ್ಲೇಷಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಕಂಬಾರರನ್ನು ಅಭಿನಂದಿಸಿ, ಸನ್ಮಾನಿಸಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಎಂ ಸಜ್ಜನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಡಾ.ಎಸ್.ಸಿ. ದಾನರಡ್ಡಿ, ಸಿದ್ಧರಾಮ ಶಿರೋಳ, ಅಬ್ಬಾಸ ಮೇಲಿನಮನಿ, ಡಾ.ಬಾಳಾಸಾಹೇಬ ಲೋಕಾಪುರ ಮತ್ತಿತರರು ಉಪಸ್ಥಿತರಿದ್ದರು.
ಹಾಡು: ಸಂಗೀತ ಉಪನ್ಯಾಸಕ ಸಿದ್ದರಾಮ ಮಠಪತಿ ಅವರು ಕಂಬಾರ ವಿರಚಿತ ‘ಏ ಕುರುಬರಣ್ಣ ಕಾಪಾಡೊ ಕುರಿಗಳನ್ನ’ ಎಂಬ ಜಾನಪದ ಗೀತೆಹಾಗೂ ಕಂಬಾರ ಅವರು ‘ಮಿಂಚು ಹುಳ’ ಗೀತೆಯನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.