ಬೆಂಗಳೂರು: ಸಮಕಾಲೀನ ಸಂಗತಿಗಳನ್ನು ಒಳಗೊಳ್ಳದ ನಾಗರಿಕತೆ ಮತ್ತು ನಗರಗಳು ಕಾಲಕ್ರಮೇಣ ಕಣ್ಮರೆಯಾಗುತ್ತವೆ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಾಚಾರಿ ಹೇಳಿದರು.
ಸುಸ್ಥಿರ ಅಭಿವೃದ್ಧಿ ಕೇಂದ್ರವು (ಸೆಂಟರ್ ಫಾರ್ ಸಸ್ಟೇನೆಬಲ್ ಡೆವಲಪ್ಮೆಂಟ್– ಸಿಎಸ್ಡಿ) ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ‘ಭವಿಷ್ಯದ ನಗರಗಳು’ ಕುರಿತ ಕಾರ್ಯಾಗಾರದಲ್ಲಿ ‘ಸ್ಮಾರ್ಟ್ ಸಿಟಿ ಕೌನ್ಸಿಲ್ – ಇಂಡಿಯಾ’ದ ವೆಬ್ಸೈಟ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹರಪ್ಪ ಮತ್ತು ಮೆಹೆಂಜಾದಾರೋ ಇಂದಿಗೂ ಉತ್ತಮ ವಿನ್ಯಾಸದ ನಗರಗಳೇ ಆಗಿವೆ. ಆದರೆ ಸ್ಥಗಿತಗೊಂಡ ಅಭಿವೃದ್ಧಿಯಿಂದ ಅವು ನಾಶವಾಗಿರಬೇಕು’ ಎಂದು ಹೇಳಿದರು.
ಕೇಂದ್ರದ ಮುಖ್ಯಸ್ಥ ಡಾ.ಎ.ರವೀಂದ್ರ, ‘ನಗರವಾಸಿಗಳ ಬದುಕನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು, ಕೈಗಾರಿಕೆಗಳು, ಸಾರ್ವಜನಿಕರು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಒಂದೆಡೆ ಸೇರಿಸಿ ಸ್ಮಾರ್ಟ್ ಸಿಟಿ ಕೌನ್ಸಿಲ್ – ಇಂಡಿಯಾವನ್ನು ಆರಂಭಿಸಲಾಗಿದೆ‘ ಎಂದರು.
ನಗರಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಡಾ.ಎಂ.ರಾಮಚಂದ್ರನ್ ಸಮರ್ಥ ಅಭಿವೃದ್ದಿ ಕೇಂದ್ರದ ದಶವಾರ್ಷಿಕ ವರದಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ‘ನಮ್ಮ ನಗರಗಳನ್ನು ಸ್ಮಾರ್ಟ್ ನಗರಗಳಾಗಿ ಪರಿವರ್ತಿಸುವಲ್ಲಿ ಪ್ರಬಲ ಮತ್ತು ಮುಂದುವರೆದ ಇ– ಆಡಳಿತದ ಅವಶ್ಯಕತೆ ಇದೆ. ಒಳಚರಂಡಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ಸಂಪರ್ಕವನ್ನು ನಿರ್ವಹಿಸುವ ಸಂಸ್ಥೆಗಳ ನಡುವೆ ಸಂವಹನ ಮತ್ತು ಸಮನ್ವಯ ಸಾಧಿಸಬೇಕು’ ಎಂದರು.
ಐಬಿಎಂನ ಹಿರಿಯ ಸಲಹೆಗಾರ ಶಂಕರ್ ಅಣ್ಣಾಸ್ವಾಮಿ, ‘ನಗರಗಳ ಅಭಿವೃದ್ಧಿಯಲ್ಲಿ ಯಾವ ತಂತ್ರಜ್ಞಾನವನ್ನು ಎಲ್ಲಿ, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟ ಯೋಜನೆಯಿರಬೇಕು. ಸ್ಮಾರ್ಟ್ ನಗರಗಳ ನಿರ್ಮಾಣದಲ್ಲಿ ಸ್ಥಳೀಯ ಜನತೆ, ಸಂಸ್ಕೃತಿ ಮತ್ತು ರಾಜಕೀಯ ಅಂಶಗಳಿಗೆ ಆದ್ಯತೆ ನೀಡಬೇಕು’ ಎಂದರು.
ಬ್ರಿಗೇಡ್ ಗ್ರೂಪ್ ಸದಸ್ಯ ಜಯಶಂಕರ್ ಮಾತನಾಡಿ ನಗರಗಳನ್ನು ಉಳಿಸುವಲ್ಲಿ ಮಳೆ ನೀರಿನ ಸಂಗ್ರಹ, ಅಂತರ್ಜಲ ಮರುಪೂರಣ, ಸೋಲಾರ್ ವಿದ್ಯುತ್ ಬಳಕೆಗೆ ಒತ್ತು ನೀಡಬೇಕು ಎಂದರು. ವೆಬ್ಸೈಟ್: https://smartcitiescouncil.com /india
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.