ಗಂಗಾವತಿ: ಆರ್. ಅನಂತ ರಾಜು ನಿರ್ದೇಶನದ ‘ಪಾಗಲ್ಪ್ರೇಮಿ’ ಸಿನಿಮಾದ ಚಿತ್ರೀಕರಣ ನಗರದಲ್ಲಿ ಗುರುವಾರ ಆರಂಭಗೊಂಡಿತು.
ಇಲ್ಲಿನ ಮಲ್ಲಿಕಾರ್ಜುನ ಮಠದಲ್ಲಿ ನಡೆದ ಚಿತ್ರೀಕರಣಕ್ಕೆ ಐಯೂಬ್ ಅನ್ಸಾರಿ ಚಾಲನೆ ನೀಡಿದರು.
ಗಣಿ ಉದ್ಯಮಿ ಬಳ್ಳಾರಿಯ ಟಪಾಲ್ ಗಣೇಶ ಕ್ಯಾಮರ ಸ್ವಿಚ್ ಆನ್ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಅನಂತರಾಜು, ಗಂಗಾವತಿ ಯುವಕನೊಬ್ಬನ ಜೀವನದಲ್ಲಿ ನಡೆದ ನೈಜ ಘಟನೆಯನ್ನೆ ಆಧಾರಿಸಿ ಚಿತ್ರ ನಿರ್ಮಾಣಕ್ಕೆ ಕೈಹಾಕಲಾಗಿದೆ. ಚಿತ್ರದಲ್ಲಿ ಒಬ್ಬ ನಾಯಕಿಗೆ ಇಬ್ಬರು ನಾಯಕರು ನಟಿಸಲಿದ್ದಾರೆ.
ನಾಯಕಿ ಮತ್ತು ನಾಯಕರ ನಡುವೆ ನಡೆಯುವ ಪ್ರಣಯದ ಸುತ್ತಲೂ ಕಥೆ ಹೆಣೆಯಲಾಗಿದೆ. ಒಟ್ಟು ಐದು ಹಾಡುಗಳಿದ್ದು, ಎರಡು ಹಾಡಿಗೆ ಗಂಗಾವತಿಯ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ತಂಡ ಉದ್ದೇಶಿಸಿದೆ ಎಂದರು. ಒಟ್ಟು ₨ಒಂದೂವರೆ ಕೋಟಿ ಮೊತ್ತದಲ್ಲಿ ಚಿತ್ರ ನಿರ್ಮಾಣವಾಗಲಿದೆ. ಬಿಡುಗಡೆ, ಪ್ರಚಾರ ಮೊದಲಾದ ಇನ್ನಿತರ ವೆಚ್ಚಕ್ಕೆ ಐವತ್ತು ಲಕ್ಷ ರೂಪಾಯಿ ಹೀಗೆ ಒಟ್ಟು ₨ ಕೋಟಿ ಬಜೆಟ್ ನಿಗದಿ ಮಾಡಲಾಗಿದೆ.
ಯುವ ನಟರಿಗೆ ಅವಕಾಶ ನೀಡುವ ಉದ್ದೇಶದಿಂದ ಪಾತರಗಿತ್ತಿ, ಆದರ್ಶ, ತೆಲುಗಿನ ವೇಟಗಾಡು ಚಿತ್ರಗಳಲ್ಲಿ ನಟಿಸಿದ ಕೊಡಗಿನ ಪ್ರಜ್ವಲ್ ಪೂವಯ್ಯ ಅವರನ್ನು ಕಥಾ ನಾಯಕಿಯಾಗಿ ಹಾಗೂ ಶ್ರವಂತ ಮತ್ತು ಸಂದೇಶ ಅವರನ್ನುನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದರು.
ನಟಿ ಅಂಬಿಕಾ, ಸಹ ನಟಿ ಪ್ರೇಮಲತಾ, ಕಲಾವಿದರಾದ ಮಲಕೇಶ ಕೋಟೆ, ಕುರಿಬಾಂಡ್ ರವಿತೇಜ, ಅನಿಲ್ ರಾಜ್, ಅಶೋಕ ಉಮಲೂಟಿ, ನಿರ್ಮಾಪಕರಾದ ಆರ್. ಸಿದ್ದರಾಜು, ಶಿವಕುಮಾರ , ಬಿ.ಕೆ. ಛಾಯಾಗ್ರಾಹಕ ಕುಮಾರ ಚಕ್ರವರ್ತಿ ಇತರರಿದ್ದರು.