ಮಂಗಳೂರು: ‘ದೇರಳಕಟ್ಟೆಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿ ಗೆಳೆಯನನ್ನು ಅಪಹರಿಸಿ, ಬಲಾತ್ಕಾರದಿಂದ ಅವರು ಲೈಂಗಿಕ ಕ್ರಿಯೆ ನಡೆಸುವಂತೆ ಬೆದರಿಕೆ ಒಡ್ಡಿ, ಚಿತ್ರೀಕರಿಸಿದ ಪ್ರಕರಣದಲ್ಲಿ ವಿದ್ಯಾರ್ಥಿನಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯ ಅಧಿಕೃತ ಪ್ರತಿ ಸಿಗುವವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆದ ಬಗ್ಗೆ ಯಾವುದೇ ಪುರಾವೆಗಳು ನಮ್ಮ ಬಳಿ ಇರಲಿಲ್ಲ. ಈ ಬಗ್ಗೆ ಆಕೆಯೂ ತಿಳಿಸಿರಲಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ವಿದ್ಯಾರ್ಥಿನಿ ನೀಡಿದ ಹೇಳಿಕೆಯ ಅಧಿಕೃತ ಪ್ರತಿ ಸಿಕ್ಕ ಬಳಿಕ ನಾವು 8 ಮಂದಿ ಆರೋಪಿಗಳ ವಿರುದ್ಧ ಅತ್ಯಾಚಾರ (ಐಪಿಸಿ 376) ಹಾಗೂ ಸಾಮೂಹಿಕ ಅತ್ಯಾಚಾರ (376 ಡಿ) ಪ್ರಕರಣ ದಾಖಲಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
‘ವಿದ್ಯಾರ್ಥಿನಿ ನೀಡಿದ ಹೇಳಿಕೆ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ಆಕೆ ಆರಂಭದಲ್ಲಿ ತಿಳಿಸಿರಲಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೂ ಸೂಕ್ತವಾಗಿ ಉತ್ತರಿಸಿರಲಿಲ್ಲ. ಆಕೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಗಳು ತನ್ನ ಜತೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದರು ಎನ್ನುವುದನ್ನು ತಿಳಿಸಿದ್ದಳು. ಈ ಹೇಳಿಕೆಯ ಅಧಿಕೃತ ಪ್ರತಿ ನಮಗೆ ಸಿಕ್ಕಿದ್ದೇ ಜ.2ರಂದು. ಹಾಗಾಗಿ ಐಪಿಸಿ ಸೆಕ್ಷನ್ 376 ಮತ್ತು 376 (ಡಿ) ಅಡಿ ಪ್ರಕರಣ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಕರಣದ ಬಳಿಕ ವಿದ್ಯಾರ್ಥಿನಿ ಊರಿಗೆ (ಬಿಹಾರ) ಮರಳಿದ್ದಾಳೆ. ಹೆಚ್ಚಿನ ವಿಚಾರಣೆಗೆ ಆಕೆ ಲಭ್ಯ ಇಲ್ಲ. ಆದರೆ, ಆಕೆಯ ಕುಟುಂಬಸ್ಥರು ತನಿಖೆಗೆ ಸಹಕರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಾಧ್ಯವಾದ ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಿದ್ದೇವೆ. ಆದಷ್ಟು ಶೀಘ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತೇವೆ’ ಎಂದು ನಗರ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜಕೀಯ ಒತ್ತಡ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಆರೋಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ತನಿಖಾಧಿಕಾರಿಯೊಬ್ಬರು, ‘ವಿಡಿಯೊ ಚಿತ್ರೀಕರಣದಲ್ಲಿ ಎಲ್ಲೂ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳಿಲ್ಲ. ವಿಚಾರಣೆ ವೇಳೆಯೂ ಆಕೆ ಈ ಬಗ್ಗೆ ತಿಳಿಸಿರಲಿಲ್ಲ. ಆರೋಪಿಗಳು ಬಲಾತ್ಕಾರದ ಸಂಭೋಗ ನಡೆಸುವಂತೆ ವಿದ್ಯಾರ್ಥಿನಿಗೆ ಹಾಗೂ ಆಕೆಯ ಸಹಪಾಠಿಗೆ ನಿರ್ದೇಶನ ನೀಡುವ ಧ್ವನಿಗಳು ವಿಡಿಯೊ ಚಿತ್ರೀಕರಣದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಹಾಗಾಗಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ನಾವು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯ ವರದಿ ಬರುವುದಕ್ಕೆ ಕಾಯಬೇಕಾಯಿತು. ಪ್ರಕರಣವನ್ನು ದುರ್ಬಲಗೊಳಿಸುವ ಯಾವುದೇ ಕೆಲಸವನ್ನೂ ಪೊಲೀಸರು ಮಾಡಿಲ್ಲ. ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಅವರು ದಾಳಿ ನಡೆಸಿದ್ದಾರೆ. ಪೊಲೀಸರು ಜೀವದ ಹಂಗು ತೊರೆದು ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ಧ್ವನಿಯ ಮಾದರಿಗಳನ್ನು ಹಾಗೂ ವಿಡಿಯೊ ದೃಶ್ಯವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇದಲ್ಲದೇ ಇತರ ಸಾಂದರ್ಭಿಕ ಸಾಕ್ಷ್ಯಗಳನ್ನೂ ಕಲೆ ಹಾಕಿದ್ದೇವೆ’ ಎಂದು ಹೇಳಿದರು.
‘ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯ ಮುಸ್ಲಿಂ ಗೆಳೆಯನ ಪಾತ್ರವೂ ಇದೆ ಎಂಬ ಆರೋಪ ಸಾಬೀತುಪಡಿಸುವಂತಹ ಪುರಾವೆ ನಮಗೆ ಸಿಕ್ಕಿಲ್ಲ. ಆತನ ಪಾತ್ರ ಇರುವುದು ಕಂಡುಬಂದರೆ ಆತನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಮಣಿಪಾಲ :ಸಾಕ್ಷಿಗಳ ವಿಚಾರಣೆ ಆರಂಭ
ಉಡುಪಿ: ಮಣಿಪಾಲ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಸಾಕ್ಷಿಗಳ ವಿಚಾರಣೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಯುವತಿ ಮತ್ತು ಆಕೆಯ ಗೆಳತಿ ಗೈರು ಹಾಜರಾಗಿದ್ದರು.
ಫೆಬ್ರುವರಿ 3ರ ವರೆಗೆ ಪರೀಕ್ಷೆಗಳು ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ದೂರುದಾರ ವಿಶ್ವವಿದ್ಯಾಲಯದ ಎಸ್ಟೇಟ್ ಆಫೀಸರ್ ಜೈವಿಠಲ್ ಮತ್ತು ಭದ್ರತಾ ಸಿಬ್ಬಂದಿ ಸುರೇಶ ವಿಚಾರಣೆಗೆ ಹಾಜರಾಗಿದ್ದರು.
ಘಟನೆಯ ಬಗ್ಗೆ ಇಬ್ಬರೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.