ಹೊಸದುರ್ಗ: ಪ್ರಪಂಚವನ್ನೇ ಬದಲಾಯಿಸುವ ಪ್ರಬಲ ಅಸ್ತ್ರವೇ ವಿದ್ಯೆ ಎಂದು ಶಿವಮೊಗ್ಗ ಧರ್ಮಕ್ಷೇತ್ರದ ಕೋಶಾಧಿಕಾರಿ ಡಾ.ಕ್ಲಿಪರ್ಡ್ ರೋಶನ್ ಪಿಂಟೋ ಅಭಿಪ್ರಾಯಪಟ್ಟರು.
ಸೋಮವಾರ ಪಟ್ಟಣದ ಸೈಂಟ್ ಆ್ಯಂಟನೀಸ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನ ತಿಳಿದುಕೊಂಡ ಮಾತ್ರಕ್ಕೆ ಬದುಕು ಪರಿಪೂರ್ಣ ವಾಗುವುದಿಲ್ಲ. ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಪಟ್ಟಣದ ಸೈಂಟ್ ಆ್ಯಂಟನೀಸ್
ಶಾಲೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಶಾಲೆಯ ವ್ಯವಸ್ಥಾಪಕ ಸ್ವಾಮಿ ಸ್ಟೀವನ್ ಡೆಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ. ಹಾಗಾಗಿ ಶಾಲೆ ಮುಗಿಸಿಕೊಂಡು ಮಗು ಮನೆಗೆ ಬಂದಾಗ ಪ್ರತಿನಿತ್ಯ ಶಾಲೆಯಲ್ಲಿ ನಡೆದ ಚಟುವಟಿಕೆಗಳ ಕುರಿತು ಮಗುವಿನೊಂದಿಗೆ ಪೋಷಕರು ಸಂವಾದ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ವಿಭಾಗದಿಂದ ಚೇತನಾ ಹಾಗೂ ಪ್ರೌಢಶಾಲಾ ವಿಭಾಗದಿಂದ ಸುಹಾಸ್ಗೆ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಹೇಮಲತಾ ಅವರಿಗೆ ವರ್ಷದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ, ಸನ್ಮಾನಿಸಲಾಗಿತ್ತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜು, ಪುರಸಭಾ ಅಧ್ಯಕ್ಷೆ ಯಶೋಧಮ್ಮ ರಂಗಪ್ಪ, ಉಪಾಧ್ಯಕ್ಷೆ ಸುಜಾತಾ
ಶಂಕರ್, ಹುಣವಿನಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ, ಸಿಸ್ಟರ್ ಝೀಟಾ ಡಿಸೋಜ, ಸಿಸ್ಟರ್ ಲೆವೆನಿಸ್ ಡಿಸೋಜ, ಲಿಖಿತ್ ಇದ್ದರು.
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಬಗೆ ಬಗೆಯ |ಉಡುಪು ಧರಿಸಿ, ಕಲಾತ್ಮಕವಾಗಿ ವಿವಿಧ ನೃತ್ಯ ಪ್ರದರ್ಶಿಸಿ, ಸಾಂಸ್ಕೃತಿಕ ಸಂಭ್ರಮ ಆಚರಿಸಿದರು.