ಹೊಸಪೇಟೆ: ‘ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ’ ಎಂದು ಹೂವಿನಹಡಗಲಿಯ ಪಂಚಶಿಲ್ಪ ಕಲಾವಿದ ಜಿ.ಬಿ.ಹಂಸಾನಂದಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
1932ರ ಆಗಸ್ಟ್ 2ರಂದು ಹೂವಿನಹಡಗಲಿ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜನಿಸಿದ ಅವರು
ವಂಶ ಪರಂಪರೆಯಿಂದ ಬಂದ ಶಿಲ್ಪ ಕಲೆಯನ್ನು ತಮ್ಮ 13ನೇ ವಯಸ್ಸಿನಿಂದಲೇ ಮೈಗೂಡಿಸಿಕೊಂಡವರು.
7ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಮುಖ್ಯವಾಗಿ ಪಂಚಶಿಲ್ಪ (ಶಿಲಾಶಿಲ್ಪ, ಮರಶಿಲ್ಪ, ಲೋಹಶಿಲ್ಪ, ಸಿಮೆಂಟ್ ಶಿಲ್ಪ ಹಾಗೂ ಸಂಕಿರಣ ಮಾಧ್ಯಮ ಶಿಲ್ಪ) ಕಲೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಶಿಲೆ, ಕಾಷ್ಠ, ಲೋಹ (ಎರಕದ ವಿಗ್ರಹ ಮತ್ತು ಕವಚ) ವಿಗ್ರಹಗಳು, ವಿಮಾನ ಗೋಪುರ, ದೇವಾಲಯದ ದ್ವಾರ, ಮಣ್ಣು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದಲೂ ವಿಗ್ರಹ ತಯಾರಿಕೆಯೊಂದಿಗೆ ಸಂಗೀತ ವಾದ್ಯಗಳನ್ನು ಸಿದ್ಧಪಡಿಸುವುದು ಇವರ ವೈಶಿಷ್ಟ್ಯಗಳಲ್ಲೊಂದು.
ಲೋಹಗಳಿಂದ ದೇವರ ರಥ ತಯಾರಿಸುವುದರಲ್ಲಿ ಅವರು ನಿಪುಣರು. ಸದ್ಯಕ್ಕೆ ಹೂವಿನ
ಹಡಗಲಿಯಲ್ಲಿ ಶ್ರೀ ಭುವನೇಶ್ವರಿ ಶಿಲ್ಪಕಲಾ ನಿಕೇತನದ ಮೂಲಕ ಶಿಲ್ಪಕಲಾ ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ.