ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟ ವ್ಯವಸ್ಥೆ ಬದಲಿಸಲು ಆಮ್‌ ಆದ್ಮಿಗೆ ಮತ’

ಉಡುಪಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ
Last Updated 12 ಏಪ್ರಿಲ್ 2014, 4:59 IST
ಅಕ್ಷರ ಗಾತ್ರ

ಉಡುಪಿ: ‘ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಪ್ರಚಾರ ಕಾರ್ಯ ಕೈಗೊಳ್ಳ­ಲಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸು­ತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಎಸ್‌.ಎಚ್‌. ಗುರುದೇವ್‌ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ತರೀಕೆರೆ, ಚಿಕ್ಕಮಗಳೂರು ನಗರ, ಉಡುಪಿಯ ಪಡುಬಿದ್ರಿ, ಕುಂದಾಪುರ, ಮಲ್ಪೆ, ಕಾರ್ಕಳ, ಬೆಳ್ಮಣ್‌, ಹೆಬ್ರಿ ಎಲ್ಲೆಡೆ ಪ್ರಚಾರ ಮಾಡಲಾಗಿದೆ. ಉಡುಪಿ ನಗರ ಮತ್ತು ಮಣಿ­ಪಾಲ ಭಾಗದಲ್ಲಿಯೂ ಪ್ರಚಾರ ನಡೆಸಿ ಮತ ಯಾಚಿಸಲಾಗುತ್ತದೆ ಎಂದು ಶುಕ್ರವಾರ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಪಕ್ಷದ ಮೂಲ ಉದ್ದೇಶವಾಗಿದೆ. ಇದಲ್ಲದೆ ಸ್ಥಳೀಯ ಸಮಸ್ಯೆ­ಗಳ ನಿವಾರಣೆಗೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋ­ದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ವಿಶ್ವ ದರ್ಜೆಯ ಪ್ರವಾಸಿ ಕೇಂದ್ರವಾಗಿ ಅಭಿ­ವೃದ್ಧಿ ಮಾಡಿದರೆ ಇಲ್ಲಿ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ಸಿಗಲಿದೆ. ಆಟೊ– ಟ್ಯಾಕ್ಸಿ ಚಾಲಕರು, ಸ್ಥಳೀಯ ವ್ಯಾಪಾರಿ­ಗಳು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ವಿದ್ಯಾವಂತ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತದೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಬೇಕಾದ ಮೂಲಸೌಕರ್ಯ ನೀಡಲಾಗುತ್ತದೆ. ಸಮಾಜದಲ್ಲಿ ಎಲ್ಲ ವರ್ಗದವರೂ ಸಾಮರಸ್ಯ­ದಿಂದ ಬಾಳುವ ವಾತಾವರಣ ನಿರ್ಮಾಣ ನಮ್ಮ ಧ್ಯೇಯವಾಗಿದೆ. ಉಡುಪಿಯಲ್ಲಿ ಸರ್ಕಾರಿ ವೈದ್ಯ­ಕೀಯ ಕಾಲೇಜು ಇಲ್ಲ. ಕಾಲೇಜು ಆರಂಭಿಸುವ ಮೂಲಕ ಈ ಭಾಗದ ಯುವಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತು ಕಸ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲು ಕ್ರಮ ಕೈಗೊಳ್ಳ­ಲಾಗುತ್ತದೆ.

ರೈತರು ಎದುರಿಸುತ್ತಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ರಚನಾತ್ಮಕವಾಗಿ ಸ್ಪಂದಿಸ­ಲಾಗು­ತ್ತದೆ. ಅಲ್ಲದೆ ಮೀನು­ಗಾರರಿಗೆ ಸಾಲ ಸೌಲಭ್ಯಗಳ ಸಹಿತ ಎಲ್ಲ ರೀತಿಯ ಅನುಕೂಲ ಕಲ್ಪಿಸಿ­ಕೊಡ­ಲಾಗುತ್ತದೆ ಎಂದು ಗುರುದೇವ್‌ ಭರವಸೆ ನೀಡಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಂದ ಜನರಿಗೆ ನಿರಾಸೆ ಆಗಿದೆ. ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಪಕ್ಷಗಳಿಂದ ಬೇಸತ್ತಿರುವ ಜನರು ಬದಲಾವಣೆಯ ನಿರೀಕ್ಷೆ­ಯಲ್ಲಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದವನಾದ ನಾನು ಎಂಜಿನಿಯರ್‌ಮುಗಿಸಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿ­ದ್ದೇನೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕು. ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಜನರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು. ‘ಆಪ್’ ಕಾರ್ಯಕರ್ತರಾದ ಹರ್ಷ ಹಳೆ­ಕೋಟೆ, ಕಾರ್ತಿಕ್‌ ಬಾಲಾ, ವಿಜಯ್‌ ಕುಮಾರ್‌ ಕಾಪು, ಮಹಮ್ಮದ್‌ ಸಿರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT