ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಗೋಧೂಳಿ ಸಮಯದಲ್ಲಿ ಅಧ್ಯಾತ್ಮದ ಅಲೆಯೇ ಹರಿಯಿತು. ‘ಶಂಭೋ ಮಹಾದೇವ’ ಗೀತೆಯೊಂದಿಗೆ ಮೈದಾನದ ತುಂಬೆಲ್ಲ ಓಂಕಾರದ ನಾದ ಹೊಮ್ಮಿತು. ಜೈ ಗುರುದೇವ ಘೋಷಣೆ ಮುಗಿಲು ಮುಟ್ಟಿತ್ತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹುಬ್ಬಳ್ಳಿ ಘಟಕದ ವತಿಯಿಂದ ನಗರದ ವತಿಯಿಂದ ಜರುಗಿದ ‘ಜ್ಞಾನ ಲಹರಿ’ ಸತ್ಸಂಗದಲ್ಲಿ ಕಂಡು ಬಂದ ದೃಶ್ಯಗಳಿವು. ನೂರಾರು ಭಕ್ತರು ಸೇರಿದ್ದ ಈ ಸಾರ್ವಜನಿಕ ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶೀರ್ವಚನ ನೀಡಿದರು.
‘ದೇಶದಲ್ಲಿ ಭ್ರಷ್ಟಾಚಾರ, ಅನಾಚಾರ ಹೆಚ್ಚಲು ಅಧ್ಯಾತ್ಮದ ಕೊರತೆಯೇ ಕಾರಣ. ಅಧ್ಯಾತ್ಮದ ಬೆಳಕು ಹರಿದರೆ, ಹಿಂಸಾಚಾರ ಇರುವುದಿಲ್ಲ. ಅಂತರಂಗದಲ್ಲಿ ವಿಶ್ವಾಸ ಇರಬೇಕು, ಹೃದಯ ನಿರ್ಮಲವಾಗಿರಬೇಕು. ದೇವರಲ್ಲಿ ನಂಬಿಕೆ ಇರಬೇಕು’ ಎಂದರು.
‘ಪರಮಾತ್ಮನಲ್ಲಿ ಭಕ್ತಿ ವಿಶ್ವಾಸ ಇದ್ದರೆ ಮುಖದಲ್ಲಿ ಪ್ರಸನ್ನತೆ ಇರುತ್ತದೆ’ ಎಂದು ಶಿ್ರೀ ಶಿ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.
ಬೃಹತ್ ಮಾನವ ಸಂಪನ್ಮೂಲ ಇದ್ದರೂ ನಾವು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದೇವೆ. ಪಶು ಸಂಪತ್ತು ಕೂಡ ಕ್ಷೀಣಿಸುತ್ತಾ ಬರುತ್ತಿದೆ. ಪಶು ಸಂಪತ್ತಿನ ವೃದ್ಧಿಯತ್ತ ಗಮನ ಕೊಡಬೇಕಿದೆ. ಅದರಂತೆ, ವಿಚಾರ ಶುದ್ಧಿಯೊಂದಿಗೆ ಆಹಾರ ಶುದ್ಧಿಯ ಕಡೆಗೂ ನಾವು ಗಮನ ಹರಿಸಬೇಕಿದೆ. ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ನೈಸರ್ಗಿಕ ಆಹಾರ ಸೇವಿಸಬೇಕು. ಇದರಿಂದ ಆರೋಗ್ಯ ವೃದಿ್ಧಯ ಜೊತೆಗೆ ಸಾವಯವ ಕೃಷಿ ಕೆ್ಷೇತ್ರಕೂ್ಕ ಪೊ್ರತಾ್ಸಹ ನೀಡಿದಂತಾಗುತ್ತದೆ’ ಎಂದು ಅವರು ಹೇಳಿದರು.
‘ಕಷ್ಟ–ಸುಖ ಒಂದಕ್ಕೊಂದು ಪೂರಕ. ಸ್ತುತಿ, ನಿಂದೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಬೇರೆಯವರಿಗೆ ನೀವು ಫುಟ್ಬಾಲ್ ಆಗುವುದು ಬೇಡ. ಎಷ್ಟೇ ಸಮಸ್ಯೆ ಇದ್ದರೂ ದೇವರಲ್ಲಿ ನಂಬಿಕೆ ಇಡಿ. ಧ್ಯಾನ, ಪ್ರಾಣಾಯಾಮ ರೂಢಿಸಿಕೊಂಡು ವರ್ತಮಾನದಲ್ಲಿ ಜೀವಿಸುವುದನ್ನು ಕಲಿಯಿರಿ’ ಎಂದು ಗುರೂಜಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಿನಿ ಮತ್ತು ಶ್ರೀನಿವಾಸ ತಂಡ ಪ್ರಸ್ತುತಪಡಿಸಿದ ಗಾಯನ ಗಮನ ಸೆಳೆಯಿತು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ ಹಾಗೂ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.