ಚಳ್ಳಕೆರೆ: ಮಣ್ಣು ಪರೀಕ್ಷೆ ಮಾಡಿಸಿ ರೈತರು ವ್ಯವಸಾಯ ಮಾಡುವುದರಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಕೃಷಿ ಸಹಾಯಕ ನಿರ್ದೇಶಕಿ ಡಾ.ಜಿ.ಎಸ್.ಸ್ಫೂರ್ತಿ ಹೇಳಿದರು.
ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಈಚೆಗೆ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ತನ್ನ ಜಮೀನಿನ ಮಣ್ಣನ್ನು ಆರೋಗ್ಯವಾಗಿಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ವ್ಶೆಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿಸಿ ವ್ಯವಸಾಯವನ್ನು ಮಾಡಬೇಕು. ರಾಸಾಯನಿಕ ಗೊಬ್ಬರ ಅಧಿಕವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆಗೆ ಹಾನಿಯುಂಟಾಗುತ್ತದೆ ಎಂದು ಹೇಳಿದರು.
ಡಾ.ಸರ್ವಜ್ಞ ಸಾಲೀಮಠ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿರುವ ಮಣ್ಣನ್ನು ಪರೀಕ್ಷೆಗೊಳಪಡಿಸುವುದು ಅತ್ಯಂತ ಅವಶ್ಯಕವಾಗಿದೆ. ಮನುಷ್ಯನಲ್ಲಿ ರಕ್ತ ಕಡಿಮೆಯಾಗಿ ನಿಶ್ಯಕ್ತನಾಗುವಂತೆ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾದರೆ ಶಕ್ತಿ ಕಳೆದುಕೊಳ್ಳುತ್ತದೆ.
ಮಣ್ಣಿನಲ್ಲಿನ ಪೋಷಕಾಂಶಗಳ ಕೊರತೆಯಿಂದ ಹೆಚ್ಚಿನ ಇಳುವರಿ ಪಡೆಯಲು ರೈತರು ವಿಫಲರಾಗುತ್ತಾರೆ. ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಲು ವ್ಶೆಜ್ಞಾನಿಕವಾಗಿ ಲಭ್ಯವಿರುವ ಸೇವೆಯನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಪಡೆದು ಬೆಳೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಿರಿ ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಡಿ.ಚಂದ್ರಪ್ಪ, ಜಿಪಂ ಸದಸ್ಯೆ ಲಕ್ಷೀದೇವಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಸದಸ್ಯ ಚಂದ್ರಣ್ಣ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಓಂಕಾರಪ್ಪ, ಕೃಷಿ ಅಧಿಕಾರಿ ಕಿರಣ್ ಕುಮಾರ್, ಆಂಜನೇಯ, ಧನಂಜಯ, ಬೈಯಣ್ಣ, ಜಯಣ್ಣ, ರುದ್ರಮುನಿ ಇದ್ದರು.