ಕುಷ್ಟಗಿ: ಬದಲಾಗುತ್ತಿರುವ ಸಾಮಾ ಜಿಕ, ಕೌಟುಂಬಿಕ ವ್ಯವಸ್ಥೆಗೆ ಅನುಗುಣವಾಗಿ ಮಹಿಳೆಯರಿಗೆ ಕಾನೂನಿನ ಜ್ಞಾನ ಅವಶ್ಯ. ಈ ವಿಷಯದಲ್ಲಿ ಅರಿವು ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಇಲ್ಲಿಯ ಸಿವಿಲ್ ಪ್ರಧಾನ ನ್ಯಾಯಾಧೀಶರಾದ ಸುಧಾ.ಎಸ್. ಓಂಕಾರ ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸ್ಥಳೀಯ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಕಾನೂನು ಸಾಕ್ಷರತಾ ರಥಕ್ಕೆ ಭಾನುವಾರ ಚಾಲನೆ ನೀಡಿ, ಬಳಿಕ ಹಿರೇಮನ್ನಾಪುರ ಗ್ರಾಮದಲ್ಲಿ ನಡೆದ ಕಾನೂನು ವಿದ್ಯಾ
ಪ್ರಸಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನಿನ ತಿಳಿವಳಿಕೆ ಹೊಂದಿದಷ್ಟೂ ಮಹಿಳೆಯರು ವಿವಿಧ ರೀತಿಯ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಕಾನೂನು ಸೇವಾ ಸಮಿತಿ ವತಿಯಿಂದ ನಡೆಯುವ ಅರಿವು ನೆರವು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಎನ್.ಬಿ.ಪಾಟೀಲ, ಕಂದಾಯ ಇಲಾಖೆಯಿಂದ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ದುರ್ಮರಣಕ್ಕೆ ಒಳಗಾಗುವ ಬಿಪಿಎಲ್ ಕುಟುಂಬದ ಮುಖ್ಯಸ್ಥನ ಹತ್ತಿರದ ಸಂಬಂಧಿಕರಿಗೆ ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ₨ 20,000 ಪರಿಹಾರ ನೀಡಲಾಗುತ್ತದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ಸರೋಜಾ ಹರಿಜನ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಇತರರು ಇದ್ದರು. ವಕೀಲ ಎನ್.ನರಸಿಂಗರಾವ್, ಎಚ್.ಆರ್.ನಾಯಕ್ ಉಪನ್ಯಾಸ ನೀಡಿದರು.
ನಾಗಪ್ಪ ಸೂಡಿ, ರುದ್ರಗೌಡ ಪಾಟೀಲ, ಅಮರೇಗೌಡ ಪಾಟೀಲ, ಎಚ್.ಆರ್.ನಾಯಕ್, ಎಂ.ಎಸ್.ಗೋಡೆ, ಶರಣಗೌಡ ಪಾಟೀಲ, ಚಂದ್ರಶೇಖರ ಉಪ್ಪಿನ, ಎ.ಎಚ್.ಪಲ್ಲೇದ, ವೆಂಕಟೇಶ ಈಳಿಗೇರ, ಪ್ರಭು ಸೂಡಿ, ಸಿಬ್ಬಂದಿ ಸುನಿಲ್ ಇದ್ದರು.