ಜಾವಗಲ್: ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಜನತೆ ಎಚ್ಚೆತ್ತುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಪಾಂಡುಮಟ್ಟಿ ವಿರಕ್ತ ಮಠದ ಗುರುಬಸವ ಮಹಾಸ್ವಾಮಿಜಿ ಸಲಹೆ ನೀಡಿದರು.
ಜಾವಗಲ್ ಹೋಬಳಿ ಸಿಂಗಟಗೆರೆ ಸಮೀಪದ ಇರುವ ವಿಶ್ವಗುರು ಬಸವಣ್ಣ ವೈರಾಗ್ಯ ನಿಧಿ ಅಕ್ಕಮಹಾದೇವಿ ವಿರಕ್ತಾಶ್ರಮದಲ್ಲಿ ಭಾನುವಾರ 7ನೇ ವರ್ಷದ ಕಲ್ಯಾಣ ಶರಣರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಮನುಗುಂಡಿ ಮಹಾಮನೆ ಬಸವಾನಂದ ಸ್ವಾಮಿಜಿ, ಹಳೇಬೀಡು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಜಿ, ಬಸವಾನಂದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ ಮಾತನಾಡಿದರು.
ಮಾರಗೊಂಡನಹಳ್ಳಿ ವಿರಕ್ತಮಠದ ಬಸವಲಿಂಗ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಕಿ ಮಂಜುಳಾ, ಸಂಗೀತ ಶಿಕ್ಷಕ ರುದ್ರಯ್ಯದಿಂಗಾಲಿ, ಕಲಾವಿದ ನರಸಿಂಹಶೆಟ್ಟಿ, ಮಾದಲಾಂಬಿಕೆ ಅವರಿಂದ ವಚನ ಗಾಯನ ನಡೆಯಿತು. ಹುಲಿಕಲ್ ನಟರಾಜು ಅವರು ಪವಾಡರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಎನ್. ನೀಲಕಂಠಪ್ಪ ಅವರು ‘ಶರಣರ ದಾರಿ’ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಹಾಲಪ್ಪ, ಪರಮೇಶ್ವರಪ್ಪ, ಚಂದ್ರಯ್ಯ, ಬಸವರಾಜು, ಗುರುಸಿದ್ದಪ್ಪ ಇದ್ದರು.