ಬೆಂಗಳೂರು: ನಗರದ ಅತ್ತಾವರದ ಕೆಎಂಸಿ ಆಸ್ಪತ್ರೆಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಇತರ ಕಟ್ಟಡಗಳಿಗೆ ಅಕ್ರಮವಾಗಿ ವಿಸ್ತರಿಸಿದ ಪ್ರಕರಣ ಸಂಬಂಧ ಮಣಿಪಾಲ ವಿಶ್ವವಿದ್ಯಾಲಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದು, ಮಣಿಪಾಲ ವಿವಿಯಿಂದ ಆಕ್ಷೇಪಣೆಗಳನ್ನು ಪಡೆಯುವಂತೆ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಮೆಸ್ಕಾಂ) ಅಸೆಸ್ಮೆಂಟ್ (ದಂಡ) ಅಧಿಕಾರಿಗೆ ಸೂಚಿಸಿದೆ.
ಆಕ್ಷೇಪಣೆ ಸಲ್ಲಿಕೆಯಾದ ನಂತರ, ವಿ.ವಿಯ ವಾದವನ್ನು ಆಲಿಸಿ, ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ಶುಕ್ರವಾರ ಸೂಚಿಸಿದೆ. ಮಣಿಪಾಲ ವಿ.ವಿಯ ಆಡಳಿತಕ್ಕೊಳಪಟ್ಟ ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಗೆ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಇತರ ಕಟ್ಟಡಕ್ಕೆ ವಿಸ್ತರಿಸಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ಹನೀಫ್ ಸಾಹೇಬ್ ಅವರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಆಧಾರದಲ್ಲಿ ಈ ಬಗ್ಗೆ ಮೆಸ್ಕಾಂನ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದರು.