ಅಫಜಲಪುರ: ’ನನ್ನ ರಾಜಕೀಯ ಜೀವನದಲ್ಲಿ ಹತ್ತು ಬಾರಿ ಸಚಿವನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಅನ್ಯಾಯ ಸರಿಪಡಿಸಿದ್ದೇನೆ’ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.
ಅವರು ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ತಾಲ್ಲೂಕು ಬ್ಲಾಕ್ ಸಮಿತಿಯ ವತಿಯಿಂದ ಗುರುವಾರ ಆಯೋಜಿಸಿದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾರ್ಮಿಕ ಸಚಿವನಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ 43 ಕಾನೂನುಗಳಿವೆ. ಅದರಲ್ಲಿ 11 ಕಾನೂನುಗಳಿಗೆ ತಿದ್ದುಪಡಿ ಮಾಡಿ ಮಾಡಿದ್ದೇನೆ. ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ ಅಡಿಯಲ್ಲಿ 1 ವರ್ಷಕ್ಕೆ 1 ಕುಟುಂಬದಲ್ಲಿ 5 ಜನರಿಗೆ ₨ 30 ಸಾವಿರ ರೂಪಾಯಿ ಆರೋಗ್ಯಕ್ಕಾಗಿ ಖರ್ಚು ಮಾಡಲು ಯೋಜನೆ ರೂಪಿಸಿದ್ದೇನೆ. 15 ಕೋಟಿ ಜನರಿಗೆ ಸಹಾಯವಾಗಿದೆ’ ಎಂದರು.
’ವಿಕೆಪಿ ಯೋಜನೆಗೆ ₨3670 ಕೋಟಿ ರೂಪಾಯಿ, ಅಫಜಲಪುರ ಏತ ನೀರಾವರಿಗೆ ₨ 400 ಕೋಟಿ ರೂಪಾಯಿ, ಸಣ್ಣ ನೀರಾವರಿಗೆ ಸಾವಿರ ಕೋಟಿ ರೂಪಾಯಿ ಹಾಗೂ 400 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿದ್ದೇನೆ. ಬಿಜೆಪಿ ಅವರು ಖರ್ಗೆ ಏನು ಮಾಡಿದ್ದಾರೆ? ಎಂದು ಕೇಳುತ್ತಾರೆ. ಅವರಿಗೆ ಕಣ್ಣಿಗೆ ಪೊರೆ ಬಂದಿದೆ. ಅಭಿವೃದ್ಧಿ ಕಾಣುತ್ತಿಲ್ಲ’ ಎಂದ ಅವರು, ’ಯಾರು ಕೆಲಸ ಮಾಡಿದ್ದಾರೆ. ತಕ್ಕಡಿಯಲ್ಲಿ ಇಟ್ಟು ತೂಕಮಾಡಿ ನನಗೆ ಮತಕೊಡಿ. ಕಳೆದ ಚುನಾವಣೆಯಲ್ಲಿ ನನಗೆ ಅಫಜಲಪುರದಲ್ಲಿ 14 ಸಾವಿರ ಮತಗಳ ಹಿನ್ನಡೆಯಾಗಿವೆ. ಆದರೆ, ಈ ಚುನಾವಣೆಯಲ್ಲಿ ನನಗೆ ಹೆಚ್ಚಿನ ಬೆಂಬಲ ಲಭೀಸಬೇಕು’ ಎಂದು ಕೋರಿದರು.
ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ’ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜನರ ನಿರೀಕ್ಷೆಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅವರಿಗೆ ಅಫಜಲಪುರ ಮತಕ್ಷೇತ್ರದಿಂದ ಕಡಿಮೆ ಮತ ಬಂದಿವೆ. ಈ ಬಾರಿ ಹಾಗಾಗಬಾರದು. ಹಾಗೇನಾದರು ಆದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ’ ಎಂದು ಅವರು ಅಲವತ್ತುಕೊಂಡರು. ಮಾಜಿ ಸಂಸದ ಇಕ್ಬಲ್ ಅಹ್ಮದ ಸರಡಗಿ ಅವರೂ ಮಾತನಾಡಿದರು.
ಪಕ್ಷಕ್ಕೆ ಸೇರ್ಪಡೆ: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಯ್ಯ ಹಿರೇಮಠ ಕರಜಗಿ, ವೆಂಕಟೇಶ ಮೊಗರೆ ಸೇರಿದಂತೆ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಗನಗೌಡ ಪಾಟೀಲ ಸಂಕನೂರ, ಎಪಿಎಂಸಿ ಅಧ್ಯಕ್ಷ ಬಸವಣ್ಣಪ್ಪ ಪಾಟೀಲ ಅಂಕಲಗಿ, ಜಿ.ಪಂ ಸದಸ್ಯ ನಿತೀನ ಗುತ್ತೇದಾರ, ಮಕ್ಬುಲ್ ಪಟೇಲ್, ರಜಾಕ್ , ಸಿದ್ದಣ್ಣಗೌಡ ಪಾಟೀಲ, ಮಹಾಂತೆ-ೇಶ ಪಾಟೀಲ, ಗುರುದೇವ ಎಸ್ ಹಿರೇಮಠ, ರಾಜಶೇಖರ ಹಿರೇಮಠ, ಗ್ರಾ.ಪಂ ಅಧ್ಯಕ್ಷ ರಮೇಶ ಬಾಕೆ, ಲಕ್ಷ್ಮಣ ಜಂಬಗಿ, ಮಹೇಶ ಇದ್ದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ ಸ್ವಾಗತಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.