ಬ್ರಹ್ಮಾವರ: ವಿಕಿರಣ ನಮ್ಮ ಜೀವನದ ಅವಿಭಾಜ್ಯ ಅಂಗ. ಹೇಗೆ ನಾವು ಮನೆಗಳಲ್ಲಿ ಅತ್ಯಂತ ಸ್ಪೋಟಕ ಅಡುಗೆ ಅನಿಲವನ್ನು ಬೃಹತ್ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಬಳಸಿ ಉಪಯೋಗಿಸುತ್ತೇವೆ ಹಾಗಯೇ ವಿಕಿರಣವನ್ನು ಮಾನವನ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಮುಂಬಯಿಯ ವಿಕಿರಣಶೀಲ ಧಾತುಗಳ ನಿರ್ಮಾಣ ಹಾಗೂ ನಿರ್ವಹಣಾ ಕೇಂದ್ರದ ಹಿರಿಯ ವ್ಯವಸ್ಥಾಪಕ ಡಾ.ಎನ್. ಪ್ರಸಾದ್ ಅವರು ಸಲಹೆ ನೀಡಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಭೌತಶಾಸ್ತ್ರ ವಿಭಾಗ, ವಿಜ್ಞಾನ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಿರಣ ಮತ್ತು ಕಿರಣ ತಾಂತ್ರಿಕ ಕೇಂದ್ರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಫಾದರ್ ಕ್ಲೆಮೆಂಟ್ ಮಸ್ಕರೇನ್ಹಸ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಸೋಮಶೇಖರ್ ಸಂಶೋಧನೆಯ ಅಗತ್ಯ ಬಗ್ಗೆ, ಡಾ. ಕರುಣಾಕರ್ ಮಾನವನ ಸೇವೆಯಲ್ಲಿ ವಿಕಿರಣ ಧಾತುಗಳ ಉಪಯೋಗದ ಬಗ್ಗೆ, ಡಾ.ಗಣೇಶ್ ಮೈಕ್ರೋಟ್ರಾನ್ ಬಗ್ಗೆ, ಡಾ.ಎನ್. ಪ್ರಸಾದ್ ಅಣು ಕಿರಣಗಳ ಉತ್ಪಾದನೆ ಬಗ್ಗೆ ತಿಳಿಸಿದರು.
ಪ್ರಾಂಶುಪಾಲ ಡಾ.ನೇರಿ ಕರ್ನೇ ಲಿಯೋ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಡಾ.ಸೋಮಶೇಖರಪ್ಪ ವಂದಿಸಿದರು. ರಾಯ್ಟನ್ ಡಿ'ಸೋಜ ಮತ್ತು ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.