ಬೆಂಗಳೂರು: ವಿಜ್ಞಾನದ ಕೌತುಕಗಳಿಗೆ ಸಾಹಿತ್ಯದ ಲೇಪ ಹಚ್ಚಿ ಸೃಜನಶೀಲರಾಗುವ ಬಗೆಯನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್ ಸಲಹೆ ನೀಡಿದರು.
ನಗರದಲ್ಲಿ ಬುಧವಾರ ನಡೆದ ದಕ್ಷಿಣ ಭಾರತೀಯ ವಿಜ್ಞಾನ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಲ್ಪನೆಯನ್ನು ತೀಡುವ ಕಥಾ ಮಾದರಿಯಲ್ಲಿ ವಿಜ್ಞಾನ ವಿಷಯವನ್ನು ನಿರೂಪಿಸಿದರೆ, ಮಕ್ಕಳ ಮನಸ್ಸಿನಲ್ಲಿ ಸೃಜನಸಶೀಲತೆ ಬೆಳೆಯುವುದಲ್ಲದೇ, ವಿಜ್ಞಾನ ಪ್ರವೃತ್ತಿ ಅರಳುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನೊವೊ ನಾರ್ಡಿಸ್ಕ್’ ಸಂಸ್ಥೆಯ ಯೋಜನಾಧಿಕಾರಿ ಪಿ.ದಿನಕರನ್, ‘ನಾಟಕ, ಸಂಗೀತ, ಸಾಹಿತ್ಯದಂತಹ ಲಲಿತ ಕಲೆಗಳೆಡೆಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಮಕ್ಕಳು ಪಠ್ಯ ವಿಷಯದಲ್ಲೂ ಚುರುಕಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ನಾಟಕೋತ್ಸವದಲ್ಲಿ ಉಡುಪಿಯ ಸೇಂಟ್ ಮೇರಿಸ್ ಆಂಗ್ಲ ಪ್ರೌಢ ಶಾಲೆ (ಪ್ರಥಮ), ಕೇರಳದ ಎಕೆಎನ್ಎಂಎಂಎ ಸ್ಮಾರಕ ಶಾಲೆ (ದ್ವಿತೀಯ), ತಮಿಳುನಾಡಿನ ಇಂದಿರಾಗಾಂಧಿ ಸರ್ಕಾರಿ ಪ್ರೌಢಶಾಲೆ (ತೃತೀಯ) ಸ್ಥಾನವನ್ನು ಪಡೆದುಕೊಂಡರು.