ರಾಜರಾಜೇಶ್ವರಿನಗರ: ‘ವಿನಯವಂತಿಕೆ, ಹೃದಯಾಳದಿಂದ ಕಾದಂಬರಿ ರಚಿಸಬೇಕಾಗಿದೆ. ಕಾವ್ಯ ಮತ್ತು ಕವಿತೆ ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತದೆ’ ಎಂದು ಲೇಖಕ ಶೂದ್ರ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಕ್ಕ ಪ್ರಕಾಶನ ವತಿಯಿಂದ ಈಚೆಗೆ ನಡೆದ ವಿಜಯಕುಮಾರ್ ಅವರ ‘ಅಂತರಾಳದ ಅಳಲು’ ಹಾಗೂ ‘ನಿರ್ಮಾಣ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕವಿ ಸಿದ್ದಲಿಂಗಯ್ಯ, ‘ಕವಿತೆ, ಕಾದಂಬರಿಗಳಿಗೆ ಬೆಲೆ ಕಟ್ಟಲು ಸಾಧ್ಯವಾಗದು. ಬಡವರ ಬಗ್ಗೆ, ಶೋಷಿತರ ಜನರ ಕಷ್ಟ ದುಃಖಗಳನ್ನು ತಿಳಿದು ಕಾದಂಬರಿಗಳನ್ನು ರಚಿಸಬೇಕು. ಯುವ ಬರಹಗಾರರು ಅವಕಾಶ ಸಿಕ್ಕಾಗ ಮಹಾನ್ ಕವಿಗಳ, ವಿದ್ವಾಂಸರ ಕಾವ್ಯಗಳನ್ನು ಅಧ್ಯಯನ ಮಾಡಿ ಸಮಾಜ ಸುಧಾರಣೆ ಕಾರ್ಯದಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.
ವಿಮರ್ಶಕ ಪ್ರೊ.ನಾರಾಯಣಘಟ್ಟ, ‘ಕಾವ್ಯಗಳು ಭಾವ ಮತ್ತು ಜ್ಞಾನ ನೀಡಬೇಕು. ಜೊತೆಗೆ ಸಮಾಜದ ಆರೋಗ್ಯಕರ ವಿಮರ್ಶೆ ಮಾಡಬೇಕು. ಆ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು’ ಎಂದರು.