ಉಜಿರೆ: ಕಾರ್ಕಳದಿಂದ ಧರ್ಮಸ್ಥಳಕ್ಕೆ ಬಾಹುಬಲಿ ಮೂರ್ತಿ ಸಾಗಾಣಿಕೆ, ಪ್ರತಿಷ್ಠಾಪನೆ ಮತ್ತು ಮಹಾಮಸ್ತಕಾಭಿಷೇಕ, ಗರ್ಭಗುಡಿಯ ನವೀಕರಣ, ಅನ್ನಪೂರ್ಣದಲ್ಲಿ ಅನ್ನ ದಾಸೋಹ, ಮಹಾ ನಡಾವಳಿ, ವಸತಿ ಛತ್ರಗಳ ನಿರ್ಮಾಣ ಮತ್ತು ನಿರ್ವಹಣೆ, ಯಕ್ಷಗಾನ ಮೇಳದ ಮೇಲುಸ್ತುವಾರಿ ಮೊದಲಾದ ಸಂದರ್ಭಗಳಲ್ಲಿ ತಾನು ಅನೇಕ ಸವಾಲುಗಳನ್ನು ಸಮಸ್ಯೆಗಳನ್ನು ಎದುರಿಸಿದ್ದು ಪ್ರತಿಯೊಂದು ಸಂದರ್ಭವೂ ನನಗೆ ವಿಶೇಷ ಅನುಭವ, ಆನಂದ ಮತ್ತು ಧನ್ಯತೆಯನ್ನು ನೀಡಿದೆ. ಎಲ್ಲವೂ ತರಬೇತಿಯ ಹಂತವಾಗಿದ್ದು ಅಣ್ಣನ ಮಾರ್ಗದರ್ಶನದಲ್ಲಿ, ಮಂಜುನಾಥ ಸ್ವಾಮಿ ಮತ್ತು ಧರ್ಮ ದೇವತೆಗಳ ಅನುಗ್ರಹದಿಂದ ಎಲ್ಲವೂ ಯಶಸ್ವಿಯಾದ ಬಗ್ಯೆ ಸಂತೃಪ್ತಿ, ಆನಂದ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದು ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರ ಷಷ್ಟ್ಯಬ್ದ ಆಚರಣೆಯ ಅಂಗವಾಗಿ ಧರ್ಮಸ್ಥಳದಲ್ಲಿ ನೌಕರ ವೃಂದದವರು ಮತ್ತು ಊರಿನವರು ಶನಿವಾರ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ತವ್ಯವನ್ನಷ್ಟೇ ಪ್ರಾಮಾಣಿಕವಾಗಿ ಮಾಡಿ ತನ್ಮೂಲಕ ಧರ್ಮಸ್ಥಳಕ್ಕೆ ಹಾಗೂ ಸಮಾಜಕ್ಕೆ ಕೈಲಾದ ಅಳಿಲ ಸೇವೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ವೃತ್ತಿಗೆ ಮಾತ್ರ ನಿವೃತ್ತಿ, ಪ್ರವೃತ್ತಿಗೆ ನಿವೃತ್ತಿ ಇಲ್ಲ ಎಂದು ಅವರು ಕಿವಿಮಾತು ಹೇಳಿದರು.
ಆಶೀರ್ವಚನ ನೀಡಿದ ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾನವ ಜನ್ಮ ಶ್ರೇಷ್ಠವಾಗಿದ್ದು ವಿವೇಕದಿಂದ ನಾವು ಧರ್ಮವನ್ನು ನಂಬಿ ನಡೆದರೆ ಧರ್ಮವು ನಮ್ಮನ್ನು ಸದಾ ಕಾಲ ರಕ್ಷಿಸುತ್ತದೆ ಎಂದು ಹೇಳಿದರು.
ವಜ್ರಕುಸುಮ ಅಭಿನಂದನ ಗ್ರಂಥ ಬಿಡುಗಡೆ ಮಾಡಿದ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಶಿಸ್ತಿನ ಸಿಪಾುಯಾದ ಡಿ. ಹರ್ಷೇಂದ್ರ ಕುಮಾರ್ ದೃಢಸಂಕಲ್ಪ ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಧರ್ಮಸ್ಥಳಕ್ಕೆ ನೀಡುತ್ತಿರುವ ಅನುಪಮ ಸೇವೆ ಬಗ್ಯೆ ಅಭಿನಂದನೆ ಸಲ್ಲಿಸಿದರು.
ಶಾಸಕ ಕೆ. ವಸಂತ ಬಂಗೇರ ಮತ್ತು ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಶುಭಾಶಂಸನೆ ಮಾಡಿದರು,
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದ ಭವ್ಯ ಪರಂಪರೆಯ ರಕ್ಷಣೆಯೊಂದಿಗೆ ಶಿಸ್ತು, ಸಾಂಪ್ರದಾಯ, ನಡೆವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಆಧುನಿಕತೆಯನ್ನು ಬಳಸಿಕೊಂಡು ಪವಿತ್ರ ಕ್ಷೇತ್ರವಾಗಿ ಇಂದು ಧರ್ಮಸ್ಥಳ ಬೆಳೆಯುತ್ತಿದೆ, ಬೆಳಗುತ್ತಿದೆ. ಕರ್ತವ್ಯದ ದೃಷ್ಟಿಯಿಂದ ಸಮಯಪ್ರಜ್ಞೆಯೊಂದಿಗೆ ಎಲ್ಲ ಸಂಪನ್ಮೂಲದ ಸದ್ಭಳಕೆ ಮತ್ತು ವೃದ್ಧಿಯಿಂದ ಸಹೋದರ ಹರ್ಷೇಂದ್ರ ಕುಮಾರ್ ಕೊಡುಗೆ ಅಮೂಲ್ಯವಾಗಿದೆ ಎಂದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಾ. ನಿರಂಜನ್ ಕುಮಾರ್ ಮತ್ತು ಪದ್ಮಲತಾ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.