ಶಹಾಪುರ: ಸುರಪುರ ಸಂಸ್ಥಾನವು ದೇಶಕ್ಕೆ ತನ್ನದೆ ಆದ ವಿಶೇಷ ಕೊಡುಗೆ ನೀಡಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ. 1857 ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನು ರಾಜಾ ನಾಲ್ವಡಿ ವೆಂಕಟಪ್ಪ ನಾಯಕವಹಿಸಿದ್ದರು. ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ಮೂಂಚೂಣಿಯಲ್ಲಿದ್ದವರು ಅದೇ ವಂಶದ ಬ್ಯಾರಿಷ್ಟರ್ ರಾಜಾ ವೆಂಕಟಪ್ಪ ನಾಯಕ ಇದ್ದರು.
ಗಾಂಧಿ ತತ್ವವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದ ಶಿಸ್ತಿನ ಸಿಪಾಯಿ ವೆಂಟಕಪ್ಪ ನಾಯಕ. ವಿಮೋಚನೆಯ ಸಂದರ್ಭದಲ್ಲಿ ಮುಸಿ್ಲಮರ ವಿರುದ್ಧ ದಾಳಿ ನಡೆಸದೆ ತಮ್ಮ ಎದುರಾಳಿ ರಜಾಕರ ವಿರುದ್ಧ ಮಾತ್ರ ಸಮರ ಸಾರಿದ್ದು ವಿಶೇಷವಾಗಿದೆ. ಇಂತಹ ನಾಯಕರನ್ನು ಸ್ಮರಿಸುವ ಹಾಗೂ ಸ್ಮಾರಕವನ್ನು ನಿರ್ಮಿಸುವ ಗೋಜಿಗೆ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಮುಂದಾಗಿಲ್ಲ.
ಹಿನ್ನೆಲೆ: ಹೈದರಾಬಾದ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದ ಸಂದರ್ಭದಲ್ಲಿ 1948ರಲ್ಲಿ ನಿಜಾಮನಿಂದ ಪ್ರೇರಿತನಾಗಿದ್ದ ಕಾಶಿಂ ರಜವಿಯವರ ದೌರ್ಜನ್ಯಕ್ಕೆ ತಡೆಯೆಂಬುದು ಇರಲಿಲ್ಲ. ನಿಜಾಮನ ಆಳ್ವಿಕೆಯ ತೆಕ್ಕೆಯಲ್ಲಿದ್ದ ಪ್ರದೇಶಗಳಲ್ಲಿ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಿಂದ ಜನತೆ ಬೇಸತ್ತು ಹೋಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ್ ಕರ್ನಾಟಕದ ಜನತೆಯ ಪಾಲಿಗೆ ಅದು ಗಗನ ಕಸುಮವಾಗಿತ್ತು. ಇಂತಹ ವಿಷಮ ವಾತಾರಣದಲ್ಲಿ ವಿಮೋಚನೆ ನೇತೃತ್ವವನ್ನು ವೆಂಕಟಪ್ಪ ನಾಯಕ ವಹಿಸಿದ್ದರು.
ಜನತೆಯ ರಕ್ಷಣೆಗಾಗಿ ತಾಳಿಕೋಟೆಯಲ್ಲಿ ಯುವಕರಿಗೆ ತರಬೇತಿಯ ಶಿಬಿರವನ್ನು ರಚಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಜೊತೆ ನೇರ ಸಂಪರ್ಕದಲ್ಲಿದ್ದು, ಮೂರು ಬಾರಿ ಅವರನ್ನು ಭೇಟಿಯಾಗಿ ಬಂದರು. ನಿಜಾಮರ ದಬ್ಬಾಳಿಯನ್ನು ಹತ್ತಿಕ್ಕಲು ರಾಜಮಾರ್ಗವೊಂದೆ ‘ಪೊಲೀಸ್ ಕಾರ್ಯಾಚರಣೆ’ ಎಂಬುವುದನ್ನು ಮನದಟ್ಟು ಮಾಡಿದರು. ಅದರ ಜೊತೆಯಲ್ಲಿ ಯುವಕರಿಗೆ ಸೈನಿಕರಿಂದ ತರಬೇತಿ ಕೊಡಿಸಿದರು.
ಎಲ್ಲರನ್ನೂ ಒಗ್ಗೂಡಿಸಿ ಸಾಂಘಿಕ ಹೋರಾಟದ ಮೂಲಕ ರಜಾಕರ ಹಾವಳಿಯನ್ನು ಹಿಮ್ಮಟ್ಟಿಸಿ ಜನತೆಯನ್ನು ವಿಮೋಚನಾ ಮುಕ್ತಗೊಳಿಸಿದರು ಎಂದು ಹೇಳುತ್ತಾರೆ ಇತಿಹಾಸಕಾರ ಭಾಸ್ಕರರಾವ ಮುಡಬೂಳ. ವೆಂಕಟಪ್ಪ ನಾಯಕರು ತಮ್ಮ ಬದುಕಿನ ಇಳಿ ವಯಸ್ಸಿನಲ್ಲಿಯೂ ಕೂಡಾ ಕೃಷಿಗೆ ಹೆಚ್ಚು ಒತ್ತುಕೊಟ್ಟು ಸರಳ ಜೀವನ ನಡೆಸಿಕೊಂಡು ಬಂದವರು. ಸಂಗೀತದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ತಬಲಾ ನುಡಿಸುವುದು ಅವರ ಹೆಚ್ಚಿನ ಹವ್ಯಾಸವಾಗಿತ್ತು.
ಇಂತಹ ಆದರ್ಶ ವ್ಯಕ್ತಿಯ ಹೆಸರನ್ನು ಸ್ಮರಿಸುವ ಕೆಲಸದ ಜೊತೆಯಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎಂದು ಅವರ ಅಭಿಮಾನಿಗಳ ಆಶಯ.
–ಟಿ.ನಾಗೇಂದ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.