ಬೀದರ್: ಶಿಕ್ಷಕರು ವೈಜ್ಞಾನಿಕ ರಾಷ್ಟ್ರ ಕಟ್ಟಲು ಪ್ರಯತ್ನಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್ ಹೇಳಿದರು.
ನಗರದ ಲಕ್ಷ್ಮಿಬಾಯಿ ಕಮಠಾಣೆ ಕನ್ಯಾ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ 21ನೇ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಮಾರ್ಗದರ್ಶಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಪಾನ್ ಬಲಷ್ಠ ರಾಷ್ಟ್ರವಾಗಲು ಅಲ್ಲಿನ ಶಿಕ್ಷಕರೇ ಕಾರಣರು ಎಂದರು.
ಶಿಕ್ಷಕರು ಪರಿಶ್ರಮ ವಹಿಸಿದರೆ ಈ ಭಾಗದ ಮಕ್ಕಳೂ ವಿಜ್ಞಾನಿಗಳಾಗಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಬಸಪ್ಪ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವುದೇ ವಿಜ್ಞಾನ ಪರಿಷತ್ ಉದ್ದೇಶವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ಖಜಾಂಚಿ ಗಿರೀಶ್ ಕಡಲೆವಾಡ ಹೇಳಿದರು.
ವಿಜ್ಞಾನ ಶಿಕ್ಷಕರು ಮಕ್ಕಳಲ್ಲಿ ಅಂಧಶ್ರದ್ಧೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಬಸವತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಸಲಹೆ ಮಾಡಿದರು.
ಕುವೆಂಪು ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಚನಶೆಟ್ಟಿ ಮಾತನಾಡಿದರು. ಪಂಡಿತ ಬಾಳೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟರೆಡ್ಡಿ ಕೋಪಗೀರ, ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸದಸ್ಯ ಮಹಾರುದ್ರಪ್ಪ ಆಣದೂರೆ, ಪ್ರಮುಖರಾದ ಸಿದ್ಧಾರೆಡ್ಡಿ ನಾಗೂರಾ, ದಿಲೀಪಕುಮಾರ್ ಕಮಠಾಣೆ, ಸುಧೀರ ಬುಜ್ಜಿ, ಶರಣಪ್ಪ ಜಲಾದೆ, ಡಾ. ಅಶೋಕ್ ಸಜ್ಜನಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಲಕಶೆಟ್ಟಿ ನಿರೂಪಿಸಿದರು. ಸುಲಭಾ ಕುಲಕರ್ಣಿ ವಂದಿಸಿದರು.