ಕೃಷ್ಣರಾಜಪುರ: ‘ಶಿಕ್ಷಣ ಕ್ಷೇತ್ರಕ್ಕೆ ಮಠಗಳು ಅಪಾರ ಕೊಡುಗೆ ನೀಡುತ್ತಿದ್ದು, ಇಲ್ಲಿ ಪ್ರವೇಶ ಪಡೆದವರು ವಿದ್ಯಾರ್ಥಿ ದೆಸೆಯಲ್ಲಿಯೇ ಶಿಸ್ತು ಅಳವಡಿಸಿಕೊಂಡು ಛಲದೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ ಸಲಹೆ ನೀಡಿದರು.
ವಿಭೂತಿಪುರ ಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವೀರಭದ್ರಸ್ವಾಮಿ ಉಚಿತ ವಸತಿ ಶಾಲೆಯ 5ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಮಾಜಿ ಕ್ರೀಡಾಪಟು ಲಿಂಗಪ್ಪ, ‘ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು’ ಎಂದರು.
ಮಠದ ಅಧ್ಯಕ್ಷ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘ವಸತಿ ಶಾಲೆಯಲ್ಲಿ ಎಲ್ಲ ವರ್ಗದ ಪ್ರತಿಭಾವಂತ ಬಡ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ. ಶಾಲೆಯಲ್ಲಿ ಈಗ 125 ವಿದ್ಯಾರ್ಥಿಗಳಿದ್ದಾರೆ’ ಎಂದರು.
‘ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರು ಅಧ್ಯಕ್ಷತೆ ವಹಿಸಿದ್ದರು. ವಸತಿ ಶಾಲೆಯ ನಿರ್ದೇಶಕಿ ವಿಮಲಾ ಹಿರೇಮಠ್, ಉಮಾದೇವಿ ಸ್ತ್ರೀಸಮಾಜದ ಕಾರ್ಯದರ್ಶಿ ಪ್ರೇಮಾ, ವೀರಭದ್ರ ಸ್ವಾಮಿ ಶಾಲೆಯ ಮುಖ್ಯ ಶಿಕ್ಷಕರಾದ ಗುರುಮೂರ್ತಿ, ಕಲ್ಲಪ್ಪನಮಠ, ಕಾರ್ಯದರ್ಶಿ ಸಿ. ಬಸವರಾಜು ಮತ್ತಿತರರು ಇದ್ದರು.