ಹಾಂದಿ (ಮೂಡಿಗೆರೆ): ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರವನ್ನು ನೀಡುವ ಮೂಲಕ, ಆ ವ್ಯಕ್ತಿಯನ್ನು ಸಮಾಜದ ಶಕ್ತಿಯನ್ನಾಗಿ ರೂಪಿಸಬೇಕು ಎಂದು ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಶಿ ಕರೆನೀಡಿದರು.
ಗ್ರಾಮದ ಕೆಳ ಹಾಂದಿಯಲ್ಲಿ ಭಾನುವಾರ ನೂತನವಾಗಿ ಸ್ಥಾಪನೆಗೊಂಡಿರುವ ಅಖಿಲಭಾರತ ಸೇವಾ ಅಭಿಯಾನದ ಉಚಿತ ವಿದ್ಯಾರ್ಥಿ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಸಂಸ್ಕಾರವಿಲ್ಲದವರು ಮಾನವರಾಗಲು ಸಾಧ್ಯವಿಲ್ಲ, ಬದುಕಿನ ಉದ್ದೇಶ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ಪರೋಪಕಾರ ಗುಣವನ್ನು ಅಳವಡಿಸಿಕೊಳ್ಳಬೇಕು, ಅಂತಹ ಪರೋಪಕಾರ ಗುಣವನ್ನು ಮಗುವಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ರೂಪದಲ್ಲಿ ನೀಡಬೇಕು ಎಂದರು.
ಹಿರಿಯರಲ್ಲಿನ ಸಂಸ್ಕಾರದ ಕೊರತೆ, ಕಿರಿಯರನ್ನು ದಾರಿ ತಪ್ಪಿಸಲು ಕಾರಣವಾಗುತ್ತಿದೆ, ತಮ್ಮಲ್ಲಿ ಅಳವಡಿಸಿಕೊಳ್ಳದ ಅಥವಾ ತಮ್ಮಲ್ಲಿ ಕಾಣಲಾಗದ ಸಂಸ್ಕಾರಗಳನ್ನು ಕಿರಿಯರಲ್ಲಿ ಬಯಸುವುದರಲ್ಲಿ ಅರ್ಥವಿಲ್ಲ, ಪ್ರತಿಯೊಬ್ಬ ಪೋಷಕರು ತಾವೂ ಬದುಕಿ ಇತರರೂ ತಮ್ಮಷ್ಟೇ ಸಂತೋಷಯುಕ್ತ ಬದುಕನ್ನು ನಡೆಸಬೇಕು ಎಂಬ ಭಾವನೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಸುಧಾರಣೆಯನ್ನು ನಿರೀಕ್ಷಿಸ ಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಸೇವಾ ಅಭಿಯಾನದ ಪ್ರಾದೇಶಿಕ ಸಂಯೋಜಕಿ ಸ್ವಾಮಿನಿ ಸ್ವಾತ್ಮನಿಷ್ಠಾನಂದ ಸರಸ್ವತಿ ಮಾತನಾಡಿ, ಸಂಸ್ಥೆಯ ವತಿಯಿಂದ ಸ್ಥಾಪಿತಗೊಂಡಿರುವ 100 ನೇ ಛಾತ್ರಾಲಯ ಇದಾಗಿದ್ದು, ಸ್ಥಳೀಯ ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಮೇಘಾಲಯದ 50 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದ್ದು, ಭಾರತಕ್ಕೆ ಸಮರ್ಥ ಪ್ರಜೆಯನ್ನು ನಿರ್ಮಾಣಮಾಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶೀಲಾ ಬಾಲಾಜಿ ಮಾತನಾಡಿ, ಶಿಕ್ಷಣವೆಂದರೆ ಮಾನವೀಯ ಮೌಲ್ಯಗಳನ್ನು ಬೆಳೆಸುವುದಾಗಿದ್ದು, ದೇಶದ ಹಿಂದುಳಿದ ರಾಜ್ಯಗಳ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಬಾಲ್ಯದಿಂದಿಡಿದು, ಯೌವ್ವನದವರೆಗೂ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿ ಯುಕ್ತ ಭಾರತೀಯ ಸಂಸ್ಕಾರವನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ನಂತರ ಸಂಸ್ಥೆಯ ವಿವಿಧ ಕೇಂದ್ರಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆಯ ಸ್ವಾಮಿನಿ ಸ್ವಾತ್ಮಬೋಧಾನಂದ ಸರಸ್ವತಿ, ಸ್ವಾಮಿನಿ ವರದಾನಂದ ಸರಸ್ವತಿ, ಸ್ವಾಮಿನಿ ಸ್ವಾತ್ಮನಿಷ್ಠಾನಂದ ಸರಸ್ವತಿ ಮಾತನಾಡಿದರು, ಕೇಂದ್ರದ ಅಬ್ಬಾಸ್, ಆಶಾ ಮುಂತಾದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.