ಮುಂಡರಗಿ: ‘ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಬದುಕು ನಡೆಸಿದರೆ ಏಡ್ಸ್ನಂತಹ ಭಯಾನಕ ರೋಗಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದು’ ಎಂದು ಮುಖ್ಯಶಿಕ್ಷಕ ಶರಣು ಗೋಗೇರಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ತಾಲ್ಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಏಡ್ಸ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಹಲವಾರು ಅಮಾಯಕರು ತಮಗೆ ತಿಳಿಯದಂತೆ ಏಡ್ಸನಂತಹ ಭಯಾನಕ ಕಾಯಲೆಗಳಿಗೆ ಬಲಿಯಾಗುತ್ತಿದ್ದಾರೆ. ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಜನರು ವಿಶೇಷವಾಗಿ ಯುವ ಜನರು ಜಾಗೃತಿನ್ನು ಹೊಂದಬೇಕು. ಕರ್ನಾಟಕ ರಾಜ್ಯ ಸರಕಾರವು ಏಡ್ಸ್ ಪ್ರಿವೆನ್ಶೆನ್ ಸಂಸ್ಥೆಯ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಆ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಏರ್ಪಡಿಸುತ್ತಿದೆ ಎಂದು ಅವರು ತಿಳಿಸಿದರು.
ನೀಲಗುಂದದ ಜೈ ಭೀಮ ಗೀಗೀ ಪದ ಜಾನಪದ ಕಲಾ ತಂಡದ ಬಸುವರಾಜ ಜಕ್ಕಮ್ಮನವರ ಹಾಗೂ ಸಂಗಡಿಗರು ಗೀಗೀ ಪದಗಳನ್ನು ಹಾಡಿ ಜನರನ್ನು ರಂಜಿಸಿದರು. ಎಸ್.ಡಿ.ಚಿಗರಿ, ವಿ.ಡಿ.ಶಿರಗುಂಪಿ, ಎ.ಬಿ.ರಂಗರೇಜಿ ಉಪಸ್ಥಿತರಿದ್ದರು. ಎಲ್.ಎಚ್.ಯಣ್ಣಿ ಸ್ವಾಗತಿಸಿದರು. ಪಿ.ಆರ್.ನಡುವಿನಹಳ್ಳಿ ನಿರೂಪಿಸಿದರು. ಎನ್. ಎಮ್. ಚಿತ್ರಗಾರ ವಂದಿಸಿದರು.