ಬೆಂಗಳೂರು: ಸಾವಿನ ಸಖ್ಯ ಬದುಕಿನ ಮೌಲ್ಯವನ್ನು ಪರಿಚಯಿಸುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಭಾನುವಾರ ನಡೆದ ಬಿ.ವಿ.ಭಾರತಿ ಅವರ ‘ಸಾಸಿವೆ ತಂದವಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾವಿನಿಂದ ಬದುಕಿನೆಡೆಗಿನ ಪಯಣವಾಗಿ ಈ ಪುಸ್ತಕ ಮೂಡಿಬಂದಿದೆ. ಸಾವು ಬದುಕುವುದನ್ನು ಕಲಿಸುತ್ತದೆ. ಬದುಕನ್ನು ಅರ್ಥಮಾಡಿಕೊಳ್ಳಲು ಅನಾರೋಗ್ಯ ಅಥವಾ ಸಾವು ಬರಲೇಬೇಕೇನೊ’ ಎಂದು ಅವರು ಸೋಜಿಗಪಟ್ಟರು.
ಪುಸ್ತಕವನ್ನು ಬಿಡುಗಡೆ ಮಾಡಿದ ಶಂಕರ ಕ್ಯಾನ್ಸರ್ ಫೌಂಡೇಶನ್ನ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ.ಶ್ರೀನಾಥ್, ‘ಇತ್ತೀಚೆಗೆ ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಅದಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಜನರಲ್ಲಿ ಕ್ಯಾನ್ಸರ್ ಬಗ್ಗೆ ಆತಂಕವಿದೆ. ಕ್ಯಾನ್ಸರ್ ಪೀಡಿತರ ಮನೋಸ್ಥೈರ್ಯವೇ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ’ ಎಂದರು.
ಪುಸ್ತಕದ ಲೇಖಕಿ ಬಿ.ವಿ.ಭಾರತಿ ಅವರು ಮಾತನಾಡಿ ‘ಸಾವಿನ ಬಾಗಿಲಲ್ಲಿ ನಿಂತು ಬದುಕನ್ನು ಪ್ರೀತಿಸುವ ಅನುಭವವನ್ನು ಬರಹವಾಗಿಸಿದ್ದೇನೆ. ಬುದ್ಧನಿಗೆ ಸಾಸಿವೆ ತಂದವಳು ಎಂಬುದು ಉದ್ಧಟ--ತನದ ಮಾತಲ್ಲ. ಒಂದು ದಿನದ ಮಟ್ಟಿಗೆ ಸಾವನ್ನು ಮುಂದೂಡಿದೆ ಎಂಬ ಬದುಕಿನ ಪ್ರೀತಿಯಷ್ಟೆ’ ಎಂದರು.
ಲೇಖಕಿ ನೇಮಿಚಂದ್ರ ಅವರು ಮಾತನಾಡಿ ‘ಕ್ಯಾನ್ಸರ್ ಪೀಡಿತರಿಗೆ ಮಾನಸಿಕ ಧೈರ್ಯ ತುಂಬುವ ಕೇಂದ್ರಗಳ ಅವಶ್ವಕತೆಯಿದೆ. ಅವರನ್ನು ರೋಗಿಗಳೆಂದು ಕರೆಯದೆ ಕ್ಯಾನ್ಸರ್ ಹೋರಾಟಗಾರರು ಎಂದು ಕರೆಯೋಣ’ ಎಂದರು.
ಅಹರ್ನಿಶಿ ಪ್ರಕಾಶನದ ಅಕ್ಷತಾ ಮತ್ತು ಕಾರ್ಯಕ್ರಮದಲ್ಲಿ ಇದ್ದರು.