ಛಾಯಾಗ್ರಾಹಕನ ಮೇಲೆ ಮಚ್ಚಿನಿಂದ ಬರ್ಬರ ಹಲ್ಲೆ

ಬೆಂಗಳೂರು: ನಗರದ ಮೂರು ಕಡೆಗಳಲ್ಲಿ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು, ಸಾರ್ವಜನಿಕರನ್ನು ಬೆದರಿಸಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದಾರೆ.
ಭಾನುವಾರ ತಡರಾತ್ರಿ ಹಾಗೂ ಸೋಮವಾರ ನಸುಕಿನಲ್ಲಿ ಮಾರಕಾಸ್ತ್ರ ಹಿಡಿದು ನಡುರಸ್ತೆಯಲ್ಲೇ ಸಾರ್ವಜನಿಕರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ನಗದು ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ರಾಜಾಜಿನಗರದ 12ನೇ ಅಡ್ಡರಸ್ತೆಯಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಇರ್ಫಾನ್ ನೆಹ್ವಾಲ್ ಎಂಬುವರನ್ನು ಅಡ್ಡಗಟ್ಟಿದ್ದ ಮೂವರು ದುಷ್ಕರ್ಮಿಗಳು, ಪರ್ಸ್ ಹಾಗೂ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಅದನ್ನು ವಿರೋಧಿಸಿದ್ದಕ್ಕೆ ಇರ್ಫಾನ್ ಅವರ ಎಡಗೈಗೆ ಮಚ್ಚಿನಿಂದ ಹೊಡೆದಿದ್ದಾರೆ.
ಇರ್ಫಾನ್ ಸಹಾಯಕ್ಕಾಗಿ ಕೂಗಾಡುತ್ತಿದ್ದಂತೆ ಸ್ಥಳೀಯರಿಬ್ಬರು ರಕ್ಷಣೆಗೆ ಬಂದಿದ್ದು, ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ನಂತರ, ಸ್ಥಳೀಯರೇ ಇರ್ಫಾನ್ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಸುದ್ದಿವಾಹಿನಿಯೊಂದರ ಛಾಯಾಗ್ರಾಹಕ ಆಗಿರುವ ಇರ್ಫಾನ್, ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸ್ ಹೊರಟಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹3 ಸಾವಿರಕ್ಕಾಗಿ ಚಾಕುವಿನಿಂದ ಇರಿದರು: ಮೆಜೆಸ್ಟಿಕ್ನಲ್ಲಿ ಸ್ನೇಹಿತರಿಬ್ಬರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಚಾಕುವಿನಿಂದ ಇರಿದು ₹3 ಸಾವಿರ ಸುಲಿಗೆ ಮಾಡಿದ್ದಾರೆ.
ಹುಳಿಮಾವು ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ನೆಲೆಸಿರುವ ಗೌರವ್ ಕುಮಾರ್ (29) ಹಾಗೂ ಅಮಿತ್ ಕುಮಾರ್, ರಾತ್ರಿ 12.30 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಹೊರಟಿದ್ದರು. ಅವರನ್ನು ಬೈಕ್ನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಸಿದ್ದರು. ಅದನ್ನು ವಿರೋಧಿಸಿದ್ದಕ್ಕೆ ಗೌರವ್ ಕುಮಾರ್ ಅವರಿಗೆ ಚಾಕುವಿನಿಂದ ಇರಿದು, ಅವರ ಬಳಿಯ ಹಣ, ಕ್ರೆಡಿಟ್ ಕಾರ್ಡ್ ಕಿತ್ತುಕೊಂಡು ಹೋಗಿದ್ದಾರೆ. ಆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಸರ ಸುಲಿಗೆ: ಆರ್.ಟಿ.ನಗರ ಬಳಿಯ ಸಿದ್ದಪ್ಪ ಲೇಔಟ್ನಲ್ಲಿರುವ ಪವಿತ್ರ ಬೇಕರಿಗೆ ಸೋಮವಾರ ಬೆಳಿಗ್ಗೆ 5.30 ಗಂಟೆ ಸುಮಾರಿಗೆ ಟೀ ಕುಡಿಯಲು ಬಂದಿದ್ದ ನಾಗರಾಜ್ ಎಂಬುವರನ್ನು ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ.
‘ಆಟೊದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಸಿದ್ದರು. 16 ಗ್ರಾಂ ಚಿನ್ನದ ಸರ ಹಾಗೂ ₹4 ಸಾವಿರ ನಗದು ಕಿತ್ತುಕೊಂಡರು. ಆಟೊದಲ್ಲೇ ಅವರೆಲ್ಲ ಪರಾರಿಯಾದರು’ ಎಂದು ನಾಗರಾಜ್, ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದಾರೆ.
ಪದೇ ಪದೇ ಸುಲಿಗೆ, ಹಲ್ಲೆ
ದುಷ್ಕರ್ಮಿಗಳಿಂದ ಹಲ್ಲೆಗೀಡಾದ ಇರ್ಫಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದ ಸ್ಥಳೀಯ ನಿವಾಸಿ ಶಹಬಾಜ್, ‘ರಾಜಾಜಿನಗರ, ಪ್ರಕಾಶ ನಗರ ಹಾಗೂ ಸುತ್ತಮುತ್ತ ಪದೇ ಪದೇ ಸುಲಿಗೆ ಹಾಗೂ ಹಲ್ಲೆಯಂಥ ಘಟನೆಗಳು ನಡೆಯುತ್ತಿವೆ’ ಎಂದು ದೂರಿದರು.
‘ನಿನ್ನೆ ರಾತ್ರಿ ಮನೆ ಎದುರು ನಿಂತಿದ್ದೆ. ರಸ್ತೆಯಲ್ಲಿ ನಾಲ್ವರು ನಿಂತಿದ್ದರು. ಯಾರೋ ಮಾತನಾಡುತ್ತಿರಬಹುದು ಎಂದು ಸುಮ್ಮನಿದ್ದೆ. ಕೆಲವು ನಿಮಿಷಗಳ ನಂತರ ಇರ್ಫಾನ್ ಕೂಗಾಡುತ್ತ ಓಡಿ ಬಂದರು. ಅವರ ರಕ್ಷಣೆಗೆ ಹೋದಾಗ ದುಷ್ಕರ್ಮಿಗಳು ಓಡಿಹೋದರು’ ಎಂದರು.
ಬೆಂಕಿ ಪೊಟ್ಟಣ ಕೊಡದಿದ್ದಕ್ಕೆ ಹಲ್ಲೆ
ಕುರುಬರಹಳ್ಳಿಯ ಪೈಪ್ಲೈನ್ ರಸ್ತೆಯಲ್ಲಿ ದುಷ್ಕರ್ಮಿಗಳು ಜಿ.ಪಿ. ಮೊನ್ಗ್ಲೂಗ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.
‘ಕೆಲಸ ಮುಗಿಸಿಕೊಂಡು ಶನಿವಾರ ರಾತ್ರಿ 12.30 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದೆ. ನನ್ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಬೆಂಕಿ ಪೊಟ್ಟಣ ಕೇಳಿದ್ದರು. ನನ್ನ ಬಳಿ ಇಲ್ಲವೆಂದು ಹೇಳುತ್ತಿದ್ದಂತೆ ಚಾಕುವಿನಿಂದ ತಲೆಯ ಹಿಂಭಾಗ ಹಾಗೂ
ಎಡಕೈಗೆ ಇರಿದರು’ ಎಂದು ಮೊನ್ಗ್ಲೂಗ್, ಮಹಾಲಕ್ಷ್ಮಿಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.