ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಕೇಂದ್ರ ಬಂದ್‌; ಆರ್‌ಬಿಐಗೆ ದೂರು

ಆರು ತಿಂಗಳಿಂದ ಬಾಗಿಲು ತೆರೆಯದ ಎಟಿಎಂಗಳು; ಗ್ರಾಹಕರ ಪರದಾಟ
Last Updated 2 ಮಾರ್ಚ್ 2018, 10:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಟಿಎಂಗಳನ್ನು ಬಂದ್‌ ಮಾಡಿ ಗ್ರಾಹಕರು ತೊಂದರೆ ಅನುಭವಿಸುವಂತೆ ಮಾಡಿರುವ ಬ್ಯಾಂಕುಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಆರ್‌ಬಿಐಗೆ ದೂರು ನೀಡಲು ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕರು ಮುಂದಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಲೀಡ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ಈಶ್ವರ್‌, ಅವಳಿ ನಗರದಲ್ಲಿ ವಿವಿಧ ಬ್ಯಾಂಕುಗಳು ಎಟಿಎಂಗಳನ್ನು ಬಂದ್‌ ಆಗಿರುವ ಕುರಿತು ಪ್ರತಿನಿತ್ಯ ಗ್ರಾಹಕರಿಂದ ದೂರುಗಳು ಬರುತ್ತಿವೆ. ಅವುಗಳ ಬಾಗಿಲು ತೆರೆಯುವಂತೆ ಈಗಾಗಲೇ ಜಿಲ್ಲಾ ಬ್ಯಾಂಕರುಗಳ ಸಭೆಯಲ್ಲೂ ಸೂಚನೆ ನೀಡಲಾಗಿದೆ. ಇಷ್ಟಾದರೂ, ನಿರ್ಲಕ್ಷ್ಯ ವಹಿಸಿರುವ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಶೀಘ್ರದಲ್ಲೇ ಎಸ್‌ಎಲ್‌ಬಿಸಿ (ಸ್ಟೇಟ್‌ ಲೀಡ್‌ ಬ್ಯಾಂಕರ್ಸ್‌ ಕಮಿಟಿ) ಹಾಗೂ ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

350ಕ್ಕೂ ಹೆಚ್ಚು ಎಟಿಎಂ ಬಂದ್‌: ಗ್ರಾಹಕರ ಸುರಕ್ಷತೆ ಉದ್ದೇಶದಿಂದ ಅವಳಿ ನಗರದಲ್ಲಿರವು ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಆದೇಶಿಸಿದ್ದರು.

ಈ ಆದೇಶದ ಪ್ರಕಾರ ಬ್ಯಾಂಕುಗಳು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವ ಬದಲಿಗೆ, ಎಟಿಎಂಗಳ ಬಾಗಿಲನ್ನೇ ಮುಚ್ಚಿವೆ. ಇದರಿಂದಾಗಿ ಗ್ರಾಹಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

ಸಿಬ್ಬಂದಿ ನೇಮಕಕ್ಕೆ ಕ್ರಮ: ‘ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಲು ಅನುಮತಿಗಾಗಿ ಕೇಂದ್ರ ಕಚೇರಿಗೆ ಮನವಿ ಮಾಡಿದ್ದೇವೆ. ಒಪ್ಪಿಗೆ ಸಿಕ್ಕ ಬಳಿಕ ಎಟಿಎಂಗಳನ್ನು ಮತ್ತೆ ಆರಂಭಿಸಲಾಗುವುದು’  ಎಂದು ಕೆನರಾ ಬ್ಯಾಂಕ್‌ ವಿದ್ಯಾನಗರ ಶಾಖೆಯ ವ್ಯವಸ್ಥಾಪಕ ಶಿವಾಜಿ ಬಳೂಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭದ್ರತಾ ಸಿಬ್ಬಂದಿ ಇಲ್ಲದೆಯೂ ಹಗಲು ವೇಳೆ ತೆರೆಯಲು ಅವಕಾಶ ನೀಡಿದರೆ ಗ್ರಾಹಕರಿಗೆ ಅನುಕೂಲ
ವಾಗುತ್ತದೆ’ ಎಂದು ಅವರು ಹೇಳಿದರು.

ಜೇಬಿಗೆ ಕತ್ತರಿ: ಒಂದು ಬ್ಯಾಂಕಿನ ಗ್ರಾಹಕರು ಇನ್ನೊಂದು ಬ್ಯಾಂಕಿನ ಎಟಿಎಂಗಳಿಂದ ಯಾವುದೇ ಶುಲ್ಕವಿಲ್ಲದೇ ಹಣ ಪಡೆಯಲು ಕೇವಲ ಐದು ಬಾರಿ ಮಾತ್ರ ಅವಕಾಶ ಇದೆ. ಐದಕ್ಕಿಂತ ಹೆಚ್ಚು ಬಾರಿ ವ್ಯವಹಾರ ಮಾಡಿದರೆ ನಿಗದಿತ ಶುಲ್ಕ ಭರಿಸಬೇಕಾಗುತ್ತದೆ. ಬ್ಯಾಂಕುಗಳ ಈ ಕ್ರಮದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ವಿಶ್ವೇಶ್ವರ ನಗರದ ವೆಂಕಟೇಶ್ವರ ದೂರಿದರು.

ಬಾಗಿಲು ತೆರೆದಿರುವ ಕೆಲವು ಎಟಿಎಂಗಳಲ್ಲಿ ಮಧ್ಯಾಹ್ನದ ಒಳಗಾಗಿ ಹಣ ಖಾಲಿ ಆಗುತ್ತಿದೆ. ಮಧ್ಯಾಹ್ನದ ಬಳಿಕ ‘ನೋ ಕ್ಯಾಶ್‌’ ಫಲಕ ತೂಗುಹಾಕಿರುತ್ತಾರೆ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
***
ಡಿಸಿ, ಸಿಇಒ ಆದೇಶ ಕಡೆಗಣನೆ

ಎಟಿಎಂಗಳಿಗೆ 24 ತಾಸು ಭದ್ರತೆ ಒದಗಿಸಬೇಕಾಗಿರುವುದು ಬ್ಯಾಂಕುಗಳ ಕರ್ತವ್ಯ. ಯಾವುದೇ ಸಬೂಬು ಹೇಳದೆ ಗ್ರಾಹಕರಿಗೆ ಅಗತ್ಯ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಅವರು, ಜಿಲ್ಲಾ ಬ್ಯಾಂಕರುಗಳ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು.

ಲಾಭ ಗಳಿಕೆಯೊಂದೇ ಅವರ ಉದ್ದೇಶವಾಗಬಾರದು, ಸಾರ್ವಜನಿಕರ ಸೇವೆ ಮುಖ್ಯವಾಗಬೇಕು. ಆದಷ್ಟು ಶೀಘ್ರ ಎಟಿಎಂಗಳ ಬಾಗಿಲು ತೆರೆಯಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್‌ ರಾಯಮಾನೆ ಕೂಡ ಸೂಚಿಸಿದ್ದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಒ ಅವರು, ಎರಡೂವರೆ ತಿಂಗಳ ಹಿಂದೆ ನೀಡಿದ್ದ ಸೂಚನೆಗಳನ್ನು ಯಾವೊಂದು ಬ್ಯಾಂಕುಗಳು ಇದುವರೆಗೂ ಪಾಲಿಸಿಲ್ಲ.
***
ಕೆಸಿಸಿಐನಿಂದಲೂ ಆರ್‌ಬಿಐಗೆ ದೂರು

ಹುಬ್ಬಳ್ಳಿ: ಅವಳಿ ನಗರದಲ್ಲಿ ಎಟಿಎಂಗಳು ಬಾಗಿಲು ಮುಚ್ಚಿರುವುದರಿಂದ ಹಣದ ಚಲಾವಣೆ ಕಡಿಮೆಯಾಗಿದ್ದು, ಕೈಗಾರಿಕೆ, ಹೋಟೆಲ್‌, ಇತ್ಯಾದಿ ವ್ಯಾಪಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಘ, ಆರ್‌ಬಿಐಗೆ ಪತ್ರ ಬರೆದಿದೆ. ಅವಳಿ ನಗರದಲ್ಲಿ ವಿವಿಧ ಬ್ಯಾಂಕುಗಳ 350 ಎಟಿಎಂಗಳಿದ್ದು, ಇವುಗಳಲ್ಲಿ ಶೇ 50ರಷ್ಟು ಬಾಗಿಲು ಮುಚ್ಚಿವೆ. ಇದರಿಂದ ಜನರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಸಮಯಕ್ಕೆ ಸರಿಯಾಗಿ ಹಣ ಲಭಿಸುತ್ತಿಲ್ಲ. ಪರಿಣಾಮ ವ್ಯಾಪಾರ ಕಡಿಮೆಯಾಗಿದೆ ಎಂದು ಕೆಸಿಸಿಐ ದೂರಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆರ್‌ಬಿಐಗೆ ಕೆಸಿಸಿಐನ ಗೌರವ ಕಾರ್ಯದರ್ಶಿ ವಿನಯ್‌ ಜವಳಿ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT