ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ವಾಡಿಕೆಯಂತೆ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಾಡಿದ ಭಾಷಣದಲ್ಲಿ ಸರ್ಕಾರದ ನೀತಿನಿರೂಪಣೆ, ಈವರೆಗಿನ ಸಾಧನೆ ಮತ್ತು ಭವಿಷ್ಯದ ಆಶೋತ್ತರಗಳ ಇಣುಕುನೋಟವಿತ್ತು.
ಆರ್ಥಿಕತೆಯ ಬಗ್ಗೆ ಪ್ರಸ್ತಾಪಿಸುವಾಗ ‘ಜಗತ್ತಿನ ಆರ್ಥಿಕ ಪರಿಸ್ಥಿತಿಯನ್ನು ಭಾರತಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕೆನ್ನುವ ಬಗ್ಗೆ ನಾವು ಯೋಚಿಸಬೇಕಿದೆ’ ಎಂಬ ವಾಕ್ಯವನ್ನು ರಾಷ್ಟ್ರಪತಿ ಒತ್ತು ಕೊಟ್ಟು ಓದಿದ್ದು ಹೆಚ್ಚು ಗಮನ ಸೆಳೆಯಿತು.
ಜಗತ್ತಿನ ಆರ್ಥಿಕತೆ ಅನುಭವಿಸುತ್ತಿರುವ ಬಿಕ್ಕಟ್ಟನ್ನು ಒಪ್ಪಿಕೊಳ್ಳುವ ಜೊತೆಜೊತೆಗೆ ಅದನ್ನು ಭಾರತದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಸರ್ಕಾರ ಆಲೋಚಿಸಿದೆ ಎನ್ನುವ ಭಾವವನ್ನು ಈ ವಾಕ್ಯಗಳು ಹೊಮ್ಮಿಸಿದವು.
ವಿದೇಶಾಂಗ ವ್ಯವಹಾರ ಮತ್ತು ಸಂದಿಗ್ಧ ಸಮಯಗಳಲ್ಲಿ ದೇಶದ ಹಿತ ಕಾಪಾಡುವ ವಿದೇಶಿ ಮೀಸಲು ನಿಧಿಯ ಬಗ್ಗೆ ರಾಷ್ಟ್ರಪತಿ ಭಾಷಣದಲ್ಲಿ ಆಶಾದಾಯಕ ಸೂಚನೆಗಳಿದ್ದವು. ‘ನಮ್ಮ ವಿದೇಶ ಮೀಸಲು ನಿಧಿ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯೂ ಸುಧಾರಿಸಿದೆ.5 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆ ರೂಪಿಸಲು ನಾವು ಬದ್ಧರಾಗಿದ್ದೇವೆ’ ಎಂದು ರಾಷ್ಟ್ರಪತಿಗಳು ಆತ್ಮವಿಶ್ವಾಸದಿಂದ ಘೋಷಿಸಿದರು.
ಆರ್ಥಿಕ ಬಿಕ್ಕಟ್ಟು, ವಿತ್ತೀಯ ಕೊರತೆ, ಜಿಡಿಪಿ ಕುಸಿದಂಥ ‘ಕೆಟ್ಟ’ ಸುದ್ದಿಗಳನ್ನೇ ಕೇಳುತ್ತಿದ್ದ ಜನರಿಗೆ ದೇಶದ ಆರ್ಥಿಕತೆ ತೀರಾ ಹದಗೆಟ್ಟಿಲ್ಲ ಎನ್ನುವ ಆಶಾಭಾವನೆಯನ್ನೂ ರಾಷ್ಟ್ರಪತಿಗಳ ಭಾಷಣ ನೀಡಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ನಾಳೆ (ಶನಿವಾರ) ಬಜೆಟ್ ಮಂಡಿಸಲಿದ್ದಾರೆ. ಕ್ಷಣಕ್ಷಣದ ತಾಜಾ ಮಾಹಿತಿಗಾಗಿಬಜೆಟ್ ವಿಶೇಷ ಪುಟವನ್ನು ನೋಡಿ.