ನವದೆಹಲಿ: ಕೇಂದ್ರ ಸರ್ಕಾರದ ಎರಡು ಯೋಜನೆಗಳ ಅಡಿಯಲ್ಲಿ ₹ 363.4 ಕೋಟಿ ಮೌಲ್ಯದ 20 ಯೋಜನೆಗಳಿಗೆ ಒಪ್ಪಿಗೆ ನೀಡಿರುವುದಾಗಿ ಕೇಂದ್ರ ಅಹಾರ ಸಂಸ್ಕರಣಾ ಉದ್ಯಮ ಸಚಿವಾಲಯವು ಬುಧವಾರ ತಿಳಿಸಿದೆ. ಕರ್ನಾಟಕದಲ್ಲಿ ಕೂಡ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಕೇಂದ್ರ ಸರ್ಕಾರವು ಈ ಯೋಜನೆಗಳಿಗೆ ₹ 102.91 ಕೋಟಿ ಅನುದಾನ ನೀಡಲಿದೆ. ಇದರಿಂದಾಗಿ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಹಾಗೂ 42,800 ರೈತರಿಗೆ ಪ್ರಯೋಜನ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಹಾರ ಸಂಸ್ಕರಣಾ ಉದ್ಯಮದ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಆಂತರಿಕ ಸಚಿವರ ಸಮಿತಿಯ (ಐಎಂಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕರ್ನಾಟಕ, ಹಿಮಾಚಲ ಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಿಜೋರಾಂ, ಗುಜರಾತ್, ಅಸ್ಸಾಂ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಆಂದ್ರಪ್ರದೇಶ ರಾಜ್ಯಗಳಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ.