ಆರ್ಥಿಕ ನೀತಿ ಎಂದರೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು. ಇದು ಆಗರ್ಭ ಶ್ರೀಮಂತನಿಂದ ಜನ ಸಾಮಾನ್ಯರವರೆಗೆ ಸಂಬಂಧಿಸಿದ್ದಾಗಿದೆ. ನಮಗೆ ಸಂಬಂಧಪಟ್ಟ ಆರ್ಥಿಕ ನಿರ್ಧಾರಗಳನ್ನು ಮನಬಂದಂತೆ ನೀವೇ ನಿರ್ಧರಿಸುವುದು ಎಷ್ಟರಮಟ್ಟಿಗೆ ಸರಿ?
ಸಾಗರ್, ಮೂಡಿಗೆರೆ
***
ಅಭಿವೃದ್ಧಿಯ ಭ್ರಮೆಯಲ್ಲಿದ್ದೇವೆ
ಭವಿಷ್ಯದ ಆರ್ಥಿಕತೆಗೆ ಬುನಾದಿಯಾಗಬೇಕಿದ್ದ ಆರ್ಥಿಕ ನೀತಿಗಳು ಈಗಿದ್ದ ಸ್ಥಿತಿಯನ್ನೇ ಬುಡಮೇಲು ಮಾಡಿದೆ. ಜನ ಸಾಮಾನ್ಯರಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ ಎಂಬ ಭ್ರಮೆ ತಳವೂರಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾ ಕಣ್ಣಿಗೆ ಮಣ್ಣೆರಚುತ್ತಾರೆ.
ಹರೀಶ್, ಕೊರಟಗೆರೆ
***
ಉದ್ಯೋಗ ಸೃಷ್ಟಿ ಹೇಗೆ?
ಉದ್ಯೋಗ ಸೃಷ್ಟಿಸಿ ಪ್ರಜೆಗಳಲ್ಲಿರುವ ಸಂಪನ್ಮೂಲ ಬಳಕೆ ಮಾಡಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕೂ ಮುನ್ನ ಎಲ್ಲರಿಗೂ ಶಿಕ್ಷಣ ಸಮರ್ಪಕವಾಗಿ ದೊರೆಯಬೇಕು. ಒಬ್ಬ ವ್ಯಕ್ತಿ ಶಿಕ್ಷಣ ಪಡೆದಾಗ ಮಾತ್ರ ಧೈರ್ಯ ಮೂಡುತ್ತದೆ. ಇಲ್ಲದಿದ್ದರೆ ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ?
ವಡಕಿ ಯಮನೂರ, ಕೊಪ್ಪಳ
***
ವಿದ್ಯಾರ್ಥಿಗಳ ಭವಿಷ್ಯ ಏನು?
ಕಾಲೇಜು ಹಂತ ತಲುಪುವ ವೇಳೆಗೆ ವಿದ್ಯಾರ್ಥಿಗಳಲ್ಲಿ ಉದ್ಯೋಗ ಪಡೆಯುವ ಹಂಬಲ ಚಿಗುರೊಡೆಯುತ್ತದೆ. ಸದ್ಯದ ದೇಶದ ಪರಿಸ್ಥಿತಿ ನೋಡಿದರೆ ಮುಂದೆ ಅವರ ಶಿಕ್ಷಣಕ್ಕೆ ಕಿಂಚಿತ್ತಿನ ಬೆಲೆಯೂ ಸಿಗದೆ ಹತಾಶರಾಗಿ ಉಗ್ರಗಾಮಿಗಳಾಗುವ ದಿನ ದೂರವಿಲ್ಲ.
ಲಖನ್ ರಾಥೋಡ್, ಕಲಬುರ್ಗಿ
***
ಆರ್ಥಿಕ ಚೇತರಿಕೆ ಅಗತ್ಯ
ತೆರಿಗೆ ಎಂದು ಹೇಳಿ ಸಾಮಾನ್ಯರ ದಿನಬಳಕೆ ವಸ್ತುಗಳಿಂದಲೂ ಹಣ ಸಂಗ್ರಹಿಸುವ ವ್ಯವಸ್ಥೆ ಮೊದಲು ತೊಲಗಲಿ. ನಾವು ಹೋಗುವ ದಾರಿ ತಪ್ಪಾದಾಗ ಸರಿಯಾದ ಮಾರ್ಗ ಹುಡುಕಬಹುದು. ಆದರೆ, ಇರುವ ಮಾರ್ಗವನ್ನೇ ಕೆಡವಿದ್ದು, ಅದರ ದುರಸ್ತಿಯನ್ನು ನಾವೇ ಮಾಡಿಕೊಳ್ಳಬೇಕಿದೆ.