ನವದೆಹಲಿ: ‘ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೊಸದಾಗಿ ಹೂಡಿಕೆ ಮಾಡುವ ಧೈರ್ಯ ತೋರಿಸುವ ಮೂಲಕಜಾಗತಿಕವಾಗಿ ಭಾರತವನ್ನು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುವ ಆರ್ಥಿಕತೆಯನ್ನಾಗಿಸುವಂತೆ’ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾಣಿಜ್ಯೋದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಐಎಂಎ) ಕಾರ್ಯಕ್ರಮದಲ್ಲಿ ಉದ್ಯಮ ವಲಯದ ಮುಖಂಡರೊಂದಿಗೆ ಮಾತನಾಡಿದ ಅವರು, ‘ಹೂಡಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವುಕಾರ್ಪೊರೇಟ್ ತೆರಿಗೆ ದರ ಕಡಿತದಂತಹ ಹಲವು ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ತಿಳಿಸಿದ್ದಾರೆ.
‘ಭಾರತವನ್ನು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳಲ್ಲಾ ಒಂದಾಗಿಸಲು ಸಾಧ್ಯವಿದೆ ಎನ್ನುವುದನ್ನು ತೋರಿಸಲು ಖಾಸಗಿ ಹೂಡಿಕೆದಾರರು ಮತ್ತು ಖಾಸಗಿ ಉದ್ಯಮಗಳು ಮುಂದೆ ಬರುವಂತೆ’ ಹೇಳಿದ್ದಾರೆ.
‘ಉದ್ಯಮಗಳ ವಿಸ್ತರಣೆ ಆಗಬೇಕು, ಆರ್ಥಿಕತೆಗೆ ಅಗತ್ಯ ಇರುವ ಉತ್ಪನ್ನಗಳು ಹೆಚ್ಚು ಉತ್ಪಾದನೆ ಆಗಬೇಕು. ಕಾರ್ಪೊರೇಟ್ ತೆರಿಗೆ ದರ ಕಡಿತದ ಬಳಿಕ ಉದ್ಯಮಗಳ ವಿಸ್ತರಣೆ ಆಗುವುದನ್ನು ಎದುರು ನೋಡುತ್ತಿದ್ದೇನೆ. ಖಾಸಗಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಆಗುವುದನ್ನು ಕಾಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.