ಮುಂಬೈ: ಬೈಜುಸ್ ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಕಂಪನಿಯ ಲೆಕ್ಕ ಪರಿಶೋಧಕರು ತೀವ್ರ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ತಿಳಿಸಿದೆ.
ಕೆಲವು ನಿರ್ದಿಷ್ಟ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಬೈಜುಸ್ ನೀಡಿರುವ ಮಾಹಿತಿ ಬಗ್ಗೆ ಐಸಿಎಐ ಪರಿಶೀಲನೆ ನಡೆಸಿದ್ದು, ಲೆಕ್ಕ ಪರಿಶೋಧಕರ ನಿರ್ಲಕ್ಷ್ಯವು ಬೆಳಕಿಗೆ ಬಂದಿದೆ ಎಂದು ಐಸಿಎಐ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ಅವರು, ಬುಧವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹಣಕಾಸು ವರದಿ ಪರಿಶೀಲನಾ ಮಂಡಳಿ (ಎಫ್ಆರ್ಆರ್ಬಿ) ಕೂಡ ಪರಿಶೀಲನೆ ನಡೆಸುತ್ತಿದೆ. ಬೈಜುಸ್ ಲೆಕ್ಕ ಪರಿಶೋಧಕರ ವಿರುದ್ಧ ದಂಡಾರ್ಹ ಕ್ರಮಕೈಗೊಳ್ಳುವಂತೆ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.
‘ಅಲ್ಲದೆ, ಲೆಕ್ಕ ಪರಿಶೋಧಕರು ಪೇಟಿಎಂಗೆ ಹೆಚ್ಚಿನ ಪಾವತಿ ಮಾಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.
‘ನಾವು ಸಲ್ಲಿಸುವ ವರದಿ ಬಗ್ಗೆ ಎಫ್ಆರ್ಆರ್ಬಿಯಿಂದ ವೈಯಕ್ತಿಕ ಹಾಗೂ ಗುಂಪು ಹಂತದಲ್ಲಿ ಮೂರು ಹಂತಗಳಲ್ಲಿ ಪರಾಮರ್ಶೆ ನಡೆಯಲಿದೆ. ಆ ನಂತರ ಲೆಕ್ಕ ಪರಿಶೋಧಕರ ಪಾತ್ರದ ಬಗ್ಗೆ ನಿರ್ದಿಷ್ಟ ಕ್ರಮಕೈಗೊಳ್ಳಲಿದೆ. ಬಳಿಕ ನಾವು ನೀಡಿರುವ ವರದಿಯು ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.