ಸ್ಟಟ್ಗಾಟ್ (ಎಎಫ್ಪಿ): ಗೋಧಿ ರಫ್ತಿಗೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ಕ್ರಮವನ್ನು ಜಿ–7 ರಾಷ್ಟ್ರಗಳ ಕೃಷಿ ಸಚಿವರು ಖಂಡಿಸಿದ್ದಾರೆ.
‘ಎಲ್ಲ ದೇಶಗಳೂ ರಫ್ತು ನಿಷೇಧ ಜಾರಿಗೆ ತಂದರೆ ಅಥವಾ ತಮ್ಮ ಮಾರುಕಟ್ಟೆಯ ಬಾಗಿಲು ಮುಚ್ಚಿದರೆ ಪರಿಸ್ಥಿತಿ ಬಿಗಡಾಯಿಸುತ್ತದೆ’ ಎಂದು ಜರ್ಮನಿಯ ಕೃಷಿ ಸಚಿವ ಜೆಮ್ ಒಜ್ಡಿಮಿರ್ ಹೇಳಿದ್ದಾರೆ.
2 ಕೋಟಿ ಟನ್ ಗೋಧಿ ಈಗ ಉಕ್ರೇನ್ನಲ್ಲಿ ಇದೆ. ಆದರೆ ಅಲ್ಲಿನ ಬಂದರುಗಳಿಂದ ರಫ್ತು ಮಾಡಲು ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಜಿ–7 ದೇಶಗಳ ಸಚಿವರು ಇತರ ದೇಶಗಳಿಗೆ ನಿರ್ಬಂಧಗಳನ್ನು ವಿಧಿಸದಂತೆ ಮನವಿ ಮಾಡಿದ್ದಾರೆ.
‘ಜಿ–7 ದೇಶಗಳು ರಫ್ತು ನಿಷೇಧಗಳ ವಿರುದ್ಧ ಮಾತನಾಡಿವೆ. ಮಾರುಕಟ್ಟೆಗಳನ್ನು ಮುಕ್ತವಾಗಿ ಇರಿಸಬೇಕು ಎಂದೂ ಹೇಳಿವೆ’ ಎಂದು ಒಜ್ಡಿಮಿರ್ ತಿಳಿಸಿದ್ದಾರೆ. ‘ಜಿ–20 ಗುಂಪಿನ ಸದಸ್ಯ ದೇಶವಾಗಿರುವ ಭಾರತವು ತನ್ನ ಪಾತ್ರ ನಿಭಾಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಜೂನ್ನಲ್ಲಿ ಜರ್ಮನಿಯಲ್ಲಿ ನಡೆಯಲಿರುವ ಜಿ–7 ಶೃಂಗ ಸಭೆಯಲ್ಲಿ ಗೋಧಿ ರಫ್ತು ನಿಷೇಧದ ಬಗ್ಗೆ ಚರ್ಚಿಸಲು ಕೃಷಿ ಸಚಿವರು ಮುಂದಾಗಿದ್ದಾರೆ. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಇದೆ.