‘ಹಬ್ಬದ ಋತುವಿನಲ್ಲಿ ತೀವ್ರ ಹೆಚ್ಚಳ ಇಲ್ಲ’
ದೇಶದಲ್ಲಿ ಆಹಾರ ಉತ್ಪನ್ನಗಳ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇದೆ. ದಾಸ್ತಾನುದಾರರ ಮೇಲೆ ಕೇಂದ್ರ ಸರ್ಕಾರ ನಿಗಾ ಇಟ್ಟಿದೆ. ಹೀಗಾಗಿ ಅಕ್ಕಿ ಗೋಧಿ ಸಕ್ಕರೆ ಮತ್ತು ಅಡುಗೆ ಎಣ್ಣೆಯ ರಿಟೇಲ್ ಮಾರಾಟ ದರವು ಮುಂಬರುವ ಹಬ್ಬದ ಋತುವಿನಲ್ಲಿ ತೀವ್ರ ಏರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ಚೋಪ್ರಾ ಹೇಳಿದ್ದಾರೆ.
ದೇಶದಲ್ಲಿ ಸಕ್ಕರೆ ದಾಸ್ತಾನು ಪ್ರಮಾಣವು 85 ಲಕ್ಷ ಟನ್ ಇದ್ದು ಮೂರರಿಂದ ಮೂರೂವರೆ ತಿಂಗಳವರೆಗೆ ಬಳಕೆಗೆ ಸಾಕಾಗುತ್ತದೆ. ಹಬ್ಬದ ಋತುವಿಗೆ ಸರ್ಕಾರ ಸಜ್ಜಾಗಿದೆ. 25 ಲಕ್ಷ ಟನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆಗಸ್ಟ್ನಲ್ಲಿ 2 ಲಕ್ಷ ಟನ್ನಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಕ್ಕಿ ಬೆಲೆಯ ಮೇಲೆ ನಿಗಾ ಇಡಲಾಗಿದೆ. ಅಕ್ಕಿ ಬೆಲೆಯು ಶೇ 10ರಷ್ಟು ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ಮುಂಗಾರು ಈ ವರ್ಷ ಉತ್ತಮವಾಗಿ ಇಲ್ಲ. ಹೀಗಾಗಿ ಉತ್ಪಾದನೆಯ ಕಡಿಮೆ ಆಗಲಿದೆ ಎನ್ನುವ ಭಾವನೆ ಸೃಷ್ಟಿಸಲಾಗುತ್ತಿದೆ. ಅಕ್ಕಿ ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.