ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿರುವುದರಿಂದ ಜುಲೈ 1ರಂದು ಕೇಂದ್ರ ಸರ್ಕಾರ ಎರಡನೆ ವರ್ಷಾಚರಣೆ ಸಮಾರಂಭ ಏರ್ಪಡಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯಲ್ಲಿ ಮಾತನಾಡಲಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯು ಎರಡು ವರ್ಷಗಳಲ್ಲಿ ಸಾಗಿ ಬಂದಿರುವುದರ ಮತ್ತು ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಸಮಾರಂಭದಲ್ಲಿ ವಿವರಗಳನ್ನು ನೀಡಲಾಗುವುದು.
ಹೊಸ ರಿಟರ್ನ್ ಸಲ್ಲಿಸುವುದಕ್ಕೆ ಅಂದು ಪ್ರಾಯೋಗಿಕ ಚಾಲನೆ ನೀಡಲಾಗುವುದು. ಸದ್ಯ ಬಳಕೆಯಲ್ಲಿ ಇರುವ ‘ಜಿಎಸ್ಟಿಆರ್–3ಬಿ’ ಮತ್ತು ‘ಜಿಎಸ್ಟಿಆರ್–1’ (ಪೂರೈಕೆ ರಿಟರ್ನ್) ಬದಲಿಗೆ ಹೊಸ ರಿಟರ್ನ್ಸ್ ಪರಿಚಯಿಸಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಸುಮಾರು 500 ಸರಕುಗಳ ಮೇಲಿನ ತೆರಿಗೆ ಇಳಿಸಿ, ರಿಟರ್ನ್ ಸಲ್ಲಿಕೆ ಸರಳಗೊಳಿಸಲಾಗಿದೆ.
ಬೆಂಗಳೂರಿನಲ್ಲಿಯೂ ಇದೇ ಸೋಮವಾರ ‘ಜಿಎಸ್ಟಿ ದಿನ’ ಆಚರಿಸಲಾಗುವುದು.
ಕೇಂದ್ರೀಯ ತೆರಿಗೆ (ಜಿಎಸ್ಟಿ) ಪ್ರಧಾನ ಮುಖ್ಯ ಕಮಿಷನರ್ ಕಚೇರಿಯು ಏರ್ಪಡಿಸಿರುವ ಸಮಾರಂಬದಲ್ಲಿ ಇನ್ಫೊಸಿಸ್ ಸಹ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಸೆಲ್ಕೊದ ಸಹ ಸ್ಥಾಪಕ ಡಾ. ಹರೀಶ್ ಹಂದೆ ಅವರು ಭಾಗವಹಿಸಲಿದ್ದಾರೆ.