ಮುಂಬೈ: ‘ಬೈಜುಸ್ ಕಂಪನಿಯು ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಸಮಸ್ಯೆ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಅಧ್ಯಕ್ಷ ದೆಬಶಿಶ್ ಮಿತ್ರಾ ಹೇಳಿದ್ದಾರೆ.
‘ಕಂಪನಿಯಲ್ಲಿ ಯವುದೇ ಗಂಭೀರವಾದ ಲೋಪ ಆಗಿರುವಂತೆ ಕಾಣುತ್ತಿಲ್ಲ. ಆದರೆ, ಕಂಪನಿಯು ಬಹಿರಂಗಪಡಿಸಿರುವ ಹಣಕಾಸು ವಿವರಗಳಲ್ಲಿ ಸಮಸ್ಯೆ ಇರುವಂತೆ ಕಂಡುಬರುತ್ತಿದೆ. ಹಣಕಾಸು ವರದಿ ಪರಿಶೀಲನಾ ಮಂಡಳಿಯು (ಎಫ್ಆರ್ಆರ್ಬಿ) ಆ ಕುರಿತು ಪರಿಶೀಲನೆ ನಡೆಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಅವರು ಕಂಪನಿಯ ಹಣಕಾಸಿನ ವಿವರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳೆದ ತಿಂಗಳು ಐಸಿಎಐಗೆ ಪತ್ರ ಬರೆದಿದ್ದರು. ಕಂಪನಿಯ ಹಣಕಾಸು ವಿವರಗಳನ್ನು ಪರಿಶೀಲನೆ ನಡೆಸುವಂತೆ ಪತ್ರದಲ್ಲಿ ತಿಳಿಸಿದ್ದರು.
‘ಕಾರ್ತಿ ಅವರು ಪತ್ರ ಬರೆದಿದ್ದಾರೆ ಎನ್ನುವ ಕಾರಣಕ್ಕಷ್ಟೇ ಪರಶೀಲನೆ ನಡೆಸುತ್ತಿಲ್ಲ. ಬೈಜುಸ್ನ ಸಮಸ್ಯೆಗಳ ಅರಿವು ಸಂಸ್ಥೆಗೆ ಇದೆ’ ಎಂದೂ ಮಿತ್ರಾ ಸ್ಪಷ್ಟಪಡಿಸಿದ್ದಾರೆ. 2021ರ ಮಾರ್ಚ್ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬೈಜುಸ್ ₹ 4,588 ಕೋಟಿ ನಷ್ಟ ಅನುಭವಿಸಿದೆ. ವರಮಾನವು ₹ 2,428 ಕೋಟಿ ಆಗಿದೆ.