ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಬಿಸಿ’ ದೋಷ‍ಪೂರಿತವಲ್ಲ; ನಿರ್ಮಲಾ

ಜಾಗತಿಕ ಸಹಕಾರ ವೃದ್ಧಿಗೆ ಒಲವು
Last Updated 21 ಅಕ್ಟೋಬರ್ 2019, 2:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ (ಪಿಎಂಸಿ) ನಡೆದಿರುವ ಹಗರಣದ ಕಾರಣಕ್ಕೆ ದಿವಾಳಿ ಸಂಹಿತೆಯಲ್ಲಿಯೇ (ಐಬಿಸಿ) ದೋಷಗಳಿವೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘ಒಂದು ಪ್ರಕರಣವನ್ನೇ ಉತ್ಪ್ರೇಕ್ಷಿಸಿ ‘ಐಬಿಸಿ’ಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಪ್ರಕರಣದಲ್ಲಿನ ಅನಿಶ್ಚಿತತೆಯನ್ನೇ ಸಾರ್ವತ್ರಿಕಗೊಳಿಸಬಾರದು’ ಎಂದು ಹೇಳಿದ್ದಾರೆ. ‘ಪಿಎಂಸಿ’ ಹಗರಣವು ‘ಐಬಿಸಿ’ಯಲ್ಲಿನ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘ಒಂದು ವೇಳೆ ಜಾರಿ ನಿರ್ದೇಶನಾಲಯವು ಕೆಲವರ ಆಸ್ತಿ ವಶಪಡಿಸಿಕೊಂಡ ಸಂದರ್ಭದಲ್ಲಿ ದಿವಾಳಿ ಸಂಹಿತೆ ಪ್ರಕ್ರಿಯೆಯಲ್ಲಿ ಅನಿಶ್ಚಿತತೆ ಉದ್ಭವಿಸಿದರೆ ಅದಕ್ಕೆ ‘ಐಬಿಸಿ’ ಕಾರಣ ಎನ್ನುವ ನಿರ್ಣಯಕ್ಕೆ ಬರುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾಗತಿಕ ಸಹಕಾರದ ಬಲವರ್ಧನೆ: ಜಾಗತಿಕ ಆರ್ಥಿಕತೆಯಲ್ಲಿನ ಅಸಮತೋಲನದ ಹಿನ್ನೆಲೆಯಲ್ಲಿ ಬಹುಬಗೆಯ ಹಂತದಲ್ಲಿ ಅಂತರರಾಷ್ಟ್ರೀಯ ಸಹಕಾರ ಬಲಪಡಿಸುವ ಅಗತ್ಯ ಇದೆ ಎಂದೂ ನಿರ್ಮಲಾ ಪ್ರತಿಪಾದಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಹಣಕಾಸು ಸಮಿತಿಯ ಪೂರ್ಣಾಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

‘ವಿತ್ತೀಯ, ಹಣಕಾಸು ಮತ್ತು ಅರ್ಥ ವ್ಯವಸ್ಥೆಯ ವಿವಿಧ ಹಂತಗಳ ಸುಧಾರಣೆ ಒಳಗೊಂಡ ಕ್ರಮಗಳಿಂದಲೇ ಪ್ರತಿಯೊಂದು ದೇಶವು ತನ್ನ ಆರ್ಥಿಕ ಬೆಳವಣಿಗೆ ಸಾಧಿಸಲಿದೆ.

‘ವಿವಿಧ ದೇಶಗಳು ಸದ್ಯಕ್ಕೆ ಎದುರಿಸುತ್ತಿರುವ ನಿರಂತರವಾದ ಆರ್ಥಿಕ ಬೆಳವಣಿಗೆ ದರ ಕುಸಿತದ ಸಮಸ್ಯೆಗೆ ‘ಐಎಂಎಫ್‌’ ಸೂಕ್ತ ಪರಿಹಾರ ಒದಗಿಸಬೇಕು. ಬಂಡವಾಳ ಒಳ ಹರಿವಿನ ಕುಸಿತವೂ ಸೇರಿದಂತೆ ವಿವಿಧ ವಿದ್ಯಮಾನಗಳು ಆರ್ಥಿಕತೆಯನ್ನು ಬಾಧಿಸುವುದನ್ನು ತಡೆಗಟ್ಟುವ ಅಗತ್ಯ ಹೆಚ್ಚಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT