ನವದೆಹಲಿ: ಗೋಧಿ, ಅಕ್ಕಿ ಮತ್ತು ಸಕ್ಕರೆ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸುವ ಪ್ರಸ್ತಾಪವು ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದೇಶಗಳಿಂದ ಗೋಧಿ ಮತ್ತು ಸಕ್ಕರೆ ಆಮದಿಗೆ ಚಿಂತಿಸಿಲ್ಲ. ಸದ್ಯ ಅದರ ಅಗತ್ಯವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇಂಡೋನೇಷ್ಯಾ, ಸೆನೆಗಲ್ ಮತ್ತು ಗಾಂಬಿಯಾ ಭಾರತದ ಮಿತ್ರರಾಷ್ಟ್ರಗಳಾಗಿವೆ. ಆಹಾರ ಭದ್ರತೆ ದೃಷ್ಟಿಯಿಂದ ಆ ರಾಷ್ಟ್ರಗಳಿಗೆ ಅಕ್ಕಿಯನ್ನು ಪೂರೈಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು 2022ರ ಮೇ ತಿಂಗಳಿನಲ್ಲಿ ಗೋಧಿ ರಫ್ತಿಗೆ ನಿಷೇಧ ಹೇರಿತ್ತು. 2023ರ ಜುಲೈನಲ್ಲಿ ಬಾಸುಮತಿಯೇತರ ಅಕ್ಕಿಗಳ ರಫ್ತಿಗೂ ನಿರ್ಬಂಧ ವಿಧಿಸಿದೆ. ಅದೇ ವರ್ಷದ ಅಕ್ಟೋಬರ್ನಲ್ಲಿ ಸಕ್ಕರೆ ರಫ್ತಿಗೂ ನಿಷೇಧ ಹೇರಿತು. ದೇಶೀಯ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಕಾಯ್ದುಕೊಳ್ಳಲು ಈ ಕ್ರಮಕೈಗೊಂಡಿದೆ.