ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ | ಉದ್ಯೋಗ ಸೃಷ್ಟಿಗಿಲ್ಲ ಒತ್ತು: ಸುಬ್ಬರಾವ್ ಅಸಮಾಧಾನ

ಆರ್‌ಬಿಐ ಮಾಜಿ ಗವರ್ನರ್‌ ಸುಬ್ಬರಾವ್ ಅಸಮಾಧಾನ
Last Updated 23 ಫೆಬ್ರುವರಿ 2023, 22:45 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಸುವ ಕುರಿತು ಹೆಚ್ಚಿನ ಒತ್ತು ನೀಡಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಬಜೆಟ್‌ ವಿಫಲವಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್‌ ಡಿ. ಸುಬ್ಬರಾವ್‌ ಹೇಳಿದ್ದಾರೆ.

ಕೋವಿಡ್‌ ಸಾಂಕ್ರಾಮಿಕಕ್ಕೂ ಮೊದಲು ನಿರುದ್ಯೋಗ ಸಮಸ್ಯೆ ಇತ್ತು. ಆದರೆ, ಕೋವಿಡ್‌ ಬಳಿಕ ಸಮಸ್ಯೆ ಹೆಚ್ಚಾಗಿದೆ. ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಒತ್ತು ನೀಡಿದೇ ಇರುವುದು ನಿರಾಸೆ ಮೂಡಿಸಿದೆ. ಉದ್ಯೋಗ ಸೃಷ್ಟಿಯಾಗದೆ ಆರ್ಥಿಕ ಬೆಳವಣಿಗೆ ಆಗಲಾರದು. ಹೀಗಾಗಿ ಉದ್ಯೋಗ ಆಧಾರಿತ ಬೆಳವಣಿಗೆಯ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ಬಗೆಹರಿಸುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಬಜೆಟ್‌ ವಿಫಲವಾಗಿದೆ. ನಿರುದ್ಯೋಗದಂತಹ ದೊಡ್ಡ ಮತ್ತು ಸಂಕೀರ್ಣ ಸಮಸ್ಯೆಗೆ ಸರಳ ಅಥವಾ ಏಕಮಾತ್ರ ಪರಿಹಾರ ಎನ್ನುವುದು ಇಲ್ಲ.

ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಾಗುತ್ತಿರುವುದಷ್ಟೇ ಅಲ್ಲದೆ ಒಂದು ಬಿಕ್ಕಟ್ಟಾಗಿಯೂ ಪರಿಣಮಿಸುತ್ತಿದೆ ಎಂದು ಸುಬ್ಬರಾವ್‌ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಹಣಕಾಸು ಸಚಿವಾಲಯವು ಜನಪರವಾದ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಹೊಣೆಗಾರಿಕೆ ನಿಭಾಯಿಸುವುದರತ್ತ ಹೆಚ್ಚು ಒತ್ತು ನೀಡಿದೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿ, ಬೆಳವಣಿಗೆಗೆ ಉತ್ತೇಜನ:
ಹಣಕಾಸು ಸಚಿವಾಲಯ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಕ್ರಮಗಳಿಂದಾಗಿ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಹೇಳಿದೆ.

ಬಂಡವಾಳ ವೆಚ್ಚ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿಗೆ ಗಮನ, ಹಣಕಾಸು ಮಾರುಕಟ್ಟೆ ಬಲಪಡಿಸುವುದು ಒಳಗೊಂಡು ಇನ್ನೂ ಹಲವು ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಸಚಿವಾಲಯವು ತನ್ನ ಆರ್ಥಿಕ ಪರಿಶೀಲನಾ ವರದಿಯಲ್ಲಿ ಹೇಳಿದೆ.

2022ರ ಡಿಸೆಂಬರ್ ತ್ರೈಮಾಸಿಕದಲ್ಲಿ ಹಲವು ಅಂಶಗಳು ಆರ್ಥಿಕ ಬೆಳವಣಿಗೆಯು ಮಂದಗತಿಯಲ್ಲಿ ಸಾಗುವ ಸೂಚನೆ ನೀಡಿವೆ. ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿಯನ್ನು ಬಿಗಿಗೊಳಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಬೇಡಿಕೆಯು ದುರ್ಬಲಗೊಂಡಂತೆ ಕಾಣುತ್ತಿದೆ. 2023ರಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎನ್ನುವುದು ಹಲವು ಸಂಸ್ಥೆಗಳ ಅಭಿಪ್ರಾಯ ಆಗಿದೆ. ಕೋವಿಡ್‌ ಸಾಂಕ್ರಾಮಿಕದ ಎದುರಾಗಿರುವ ಅನಿಶ್ಚಿತ ಸ್ಥಿತಿ ಮತ್ತು ಯುರೋಪ್‌ನಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಆರ್ಥಿಕ ಬೆವಳಣಿಗೆಯನ್ನು ಮತ್ತಷ್ಟು ಕಡಿಮೆ ಆಗುವಂತೆ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT