ನವದೆಹಲಿ: ಹೆಚ್ಚುವರಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಟೊಮೆಟೊ ಮತ್ತು ಆಲೂಗಡ್ಡೆ ಬೆಲೆಯನ್ನು ತಗ್ಗಿಸಲು ಕೂಡ ಪ್ರಯತ್ನ ನಡೆದಿದೆ ಎಂದು ತಿಳಿಸಿದೆ.
ಈರುಳ್ಳಿ ದಾಸ್ತಾನನ್ನು ಆಗಸ್ಟ್ ಕೊನೆಯ ವಾರದಿಂದಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ. ಇದರ ಪರಿಣಾಮವಾಗಿ ದೇಶದ ಮಹಾನಗರಗಳಲ್ಲಿ ಈರುಳ್ಳಿ ಬೆಲೆಯು ಅಕ್ಟೋಬರ್ 14ರ ವೇಳೆಗೆ ಕೆ.ಜಿ.ಗೆ ಸರಾಸರಿ ₹ 42ರಿಂದ ₹ 57ರ ಮಟ್ಟಕ್ಕೆ ಬಂದಿದೆ.
ಅಖಿಲ ಭಾರತ ಸರಾಸರಿ ಮಟ್ಟಕ್ಕಿಂತ ಈರುಳ್ಳಿ ಬೆಲೆ ಜಾಸ್ತಿ ಆಗಿರುವ ರಾಜ್ಯಗಳಲ್ಲಿ, ಹಿಂದಿನ ತಿಂಗಳ ಬೆಲೆಯ ಮಟ್ಟಕ್ಕಿಂತ ಹೆಚ್ಚಾಗಿರುವ ಕಡೆಗಳಲ್ಲಿ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 12ರವರೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಒಟ್ಟು 67,357 ಟನ್ ಈರುಳ್ಳಿಯನ್ನು ಬಿಡುಗಡೆ ಮಾಡಲಾಗಿದೆ.