ನವದೆಹಲಿ: ಈ ವಾರಾಂತ್ಯದಲ್ಲಿ ನಡೆಯಬೇಕಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ನ ನಿರ್ದೇಶಕ ಮಂಡಳಿ ಸಭೆಯನ್ನು ಮುಂದೂಡಲಾಗಿದೆ.
2019–20ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡನೆ ನಂತರ ಮೊದಲ ಬಾರಿಗೆ ನಡೆಯಲಿದ್ದ ಈ ಸಾಂಪ್ರದಾಯಿಕ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯಲ್ ಮಾತನಾಡಲಿದ್ದರು.
ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಪ್ರಸಕ್ತ ಹಣಕಾಸು ವರ್ಷದ ಮಧ್ಯಂತರ ಲಾಭಾಂಶದ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಇದೇ 9ರಂದು ಮಂಡಳಿ ಸಭೆ ಸೇರಲು ದಿನ ನಿಗದಿಯಾಗಿತ್ತು. ಈಗ ಅದನ್ನು ಇದೇ 18ಕ್ಕೆ ಮುಂದೂಡಲಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ₹ 10 ಸಾವಿರ ಕೋಟಿಗಳ ಮಧ್ಯಂತರ ಲಾಭಾಂಶ ಪಾವತಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ₹ 40 ಸಾವಿರ ಕೋಟಿ ಪಾವತಿಸಿದೆ.