ಮುಂಬೈ: ಇಸ್ರೇಲ್–ಇರಾನ್ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಸಂಪತ್ತು ಸೋಮವಾರ ₹5.18 ಲಕ್ಷ ಕೋಟಿ ಕರಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಮಧ್ಯಪ್ರಾಚ್ಯದಲ್ಲಿ ಹದಗೆಟ್ಟ ಪರಿಸ್ಥಿತಿಯು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಹೂಡಿಕೆದಾರರು ಹೆಚ್ಚು ಜಾಗರೂಕರಾಗಿದ್ದಾರೆ. ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಷೇರು ಸೂಚ್ಯಂಕಗಳು ಇಳಿದಿವೆ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) 845 ಅಂಶ (ಶೇ 1.14) ಕುಸಿದು 73,399ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ಅವಧಿಯಲ್ಲಿ ಒಂದು ಹಂತದಲ್ಲಿ 73,315ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 246 ಅಂಶ (ಶೇ 1.10) ಇಳಿದು 22,272ಕ್ಕೆ ಕೊನೆಗೊಂಡಿತು. ಶುಕ್ರವಾರವೂ ಷೇರು ಸೂಚ್ಯಂಕಗಳು ಇಳಿಕೆಯಾಗಿದ್ದವು.
ವಿಪ್ರೊ, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್, ಬಜಾಜ್ ಫೈನಾನ್ಸ್, ಟಾಟಾ ಮೋಟರ್ಸ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಟೆಕ್ ಮಹೀಂದ್ರ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರಿನ ಮೌಲ್ಯ ಇಳಿಕೆ ಆಗಿದೆ. ನೆಸ್ಲೆ, ಮಾರುತಿ ಸುಜುಕಿ ಮತ್ತು ಭಾರ್ತಿ ಏರ್ಟೆಲ್ ಗಳಿಕೆ ಕಂಡಿವೆ.
ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 1.54 ಮತ್ತು ಮಿಡ್ಕ್ಯಾಪ್ ಸೂಚ್ಯಂಕ ಶೇ 1.50ರಷ್ಟು ಇಳಿದಿದೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲವು ಶೇ 1.04ರಷ್ಟು ಇಳಿಕೆಯಾಗಿ, ಪ್ರತಿ ಬ್ಯಾರೆಲ್ಗೆ ₹7,468 (ಅಮೆರಿಕ ಡಾಲರ್ 89.51) ಮುಟ್ಟಿದೆ.