ನವದೆಹಲಿ : ತೊಗರಿ ಬೇಳೆ ದಾಸ್ತುನು ಬಗ್ಗೆ ಸಂಪೂರ್ಣ ಮಾಹಿತಿ ನೀಡದೇ ಇರುವ ವ್ಯಾಪಾರಿಗಳು, ಮಿಲ್ಗಳು, ಆಮದುದಾರರು ಮತ್ತು ದಾಸ್ತಾನುದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.
ತೊಗರಿ, ಉದ್ದಿನ ಬೇಳೆ ಬೆಳೆಯುವ ಮತ್ತು ಬಳಕೆ ಮಾಡುವ ಪ್ರಮುಖ ರಾಜ್ಯಗಳಲ್ಲಿ ಇರುವ ದಾಸ್ತಾನಿನ ಕುರಿತು ಮಾಹಿತಿ ಪಡೆಯಲು ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಭೆ ನಡೆಸಿತು. ಕೆಲವು ರಾಜ್ಯಗಳಲ್ಲಿ ತೊಗರಿ ಬೇಳೆ ದಾಸ್ತಾನು ಪ್ರಮಾಣವು ತಯಾರಿಕೆ ಮತ್ತು ಬಳಕೆಗೆ ಹೋಲಿಸಿದರೆ ಕಡಿಮೆ ಇರುವಂತೆ ಕಂಡುಬಂದಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ವಿವಿಧ ಸಂಸ್ಥೆಗಳು ಹೊಂದಿರುವ ದಾಸ್ತಾನಿನ ಪರಿಶೀಲನೆ ನಡೆಸುವಂತೆ ಮತ್ತು ದಾಸ್ತಾನಿನ ಮಾಹಿತಿ ಮುಚ್ಚಿಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವಾಲಯು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಆಂಧ್ರಪ್ರದೇಶ, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತೊಗರಿ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ವಿವಿಧ ಮಾರುಕಟ್ಟೆ ವ್ಯಾಪಾರಿಗಳು, ಮಿಲ್ಗಳು ಮತ್ತು ದಾಸ್ತಾನು ನಿರ್ವಹಣೆ ಮಾಡುವವರಿಂದ ಖದ್ದಾಗಿ ಮಾಹಿತಿಗಳನ್ನು ಪಡೆಯಲು ಗ್ರಾಹಕ ವ್ಯವಹಾರಗಳ ಇಲಾಖೆಯು 12 ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ.
ಕೃಷಿ ಸಚಿವಾಲಯದ ಎರಡನೇ ಅಂದಾಜಿನ ಪ್ರಕಾರ, 2022–23ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್) ತೊಗರಿ ಉತ್ಪಾದನೆ 3.66 ಕೋಟಿ ಆಗುವ ಅಂದಾಜು ಮಾಡಲಾಗಿದೆ. ಹಿಂದಿನ ಅವಧಿಯಲ್ಲಿ 4.22 ಕೋಟಿ ಟನ್ ಆಗಿತ್ತು.