ನವದೆಹಲಿ: ಆದಾಯ ತೆರಿಗೆ ಮೌಲ್ಯಮಾಪನ ಪುನರಾರಂಭಿಸುವ ಕಾಲಮಿತಿಯನ್ನು ಆರು ವರ್ಷಗಳಿಗೆ ಬದಲಾಗಿ ಮೂರು ವರ್ಷಗಳಿಗೆ ತಗ್ಗಿಸಲಾಗಿದೆ.
ಇದೇ ವೇಳೆ ಗಂಭೀರವಾದ ತೆರಿಗೆ ವಂಚನೆ ಪ್ರಕರಣಗಳಲ್ಲಿ ₹ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆದಾಯ ಮರೆಮಾಚಿದ್ದರೆ ಅಂತಹ ಪ್ರಕರಣಗಳನ್ನು ಪುನರಾರಂಭಿಸುವ ಕಾಲಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂತಹ ಪ್ರಕರಣಗಳ ಕಾಲಮಿತಿ 10 ವರ್ಷಗಳೇ ಇರಲಿದೆ.
ಅನಿವಾಸಿ ಭಾರತೀಯರು (ಎನ್ಆರ್ಐ) ಎದುರಿಸುತ್ತಿರುವ ದುಪ್ಪಟ್ಟು ತೆರಿಗೆ ಸಮಸ್ಯೆ ಬಗೆಹರಿಸಲು ತೆರಿಗೆ ಇಲಾಖೆಯು ನೆರವಾಗಲಿದೆ.
ಷೇರು, ಬಾಂಡ್ಗಳ ಮೇಲಿನ ಬಂಡವಾಳ ಗಳಿಕೆ, ಲಾಭಾಂಶ ವರಮಾನ ಹಾಗೂ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಂದ ಬರುವ ಬಡ್ಡಿ ವರಮಾನದ ಮಾಹಿತಿಗಳು ಮುಂಚಿತವಾಗಿಯೇ ಭರ್ತಿ ಆಗಿರುವ ಆದಾಯ ತೆರಿಗೆ ರಿಟರ್ನ್ಸ್ ಶೀಘ್ರವೇ ಲಭ್ಯವಾಗಲಿದೆ.
₹ 50 ಲಕ್ಷದವರೆಗಿನ ವಹಿವಾಟು ನಡೆಸುವ ಸಣ್ಣ ತೆರಿಗೆದಾರರಿಗೆ ತೆರಿಗೆ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ರಚನೆ ಆಗಲಿದೆ.
ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು 1.10 ಲಕ್ಷ ತೆರಿಗೆದಾರರು ವಿವಾದ್ ಸೆ ವಿಶ್ವಾಸ್ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವನ್ನು ಡಿಜಿಟಲ್ ರೂಪದಲ್ಲಿಯೇ ಪ್ರಾರಂಭಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.