ನವದೆಹಲಿ: ಭಾರತದ ಅಸಂಘಟಿತ ದುಡಿಯುವ ವಲಯವು ಕೋವಿಡ್ ಸಾಂಕ್ರಾಮಿಕದ ಸಂಕಷ್ಟದಿಂದ ಹೊರಬರಲು ಅನುಕೂಲ ಕಲ್ಪಿಸಲು ₹ 3,716 ಕೋಟಿ ಸಾಲ ಮಂಜೂರು ಮಾಡಿರುವುದಾಗಿ ವಿಶ್ವ ಬ್ಯಾಂಕ್ ಬುಧವಾರ ಹೇಳಿದೆ.
ಸದ್ಯದ ಸಾಂಕ್ರಾಮಿಕದ ಪರಿಸ್ಥಿತಿ, ಭವಿಷ್ಯದ ವಿಪತ್ತುಗಳನ್ನು ನಿಭಾಯಿಸಲು ಈ ಸಾಲವು ರಾಜ್ಯಗಳಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಒಟ್ಟಾರೆ ₹ 3,716 ಕೋಟಿ ಮೊತ್ತದಲ್ಲಿ ವಿಶ್ವ ಬ್ಯಾಂಕ್ನ ಅಂಗಸಂಸ್ಥೆಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ₹ 836.10 ಕೋಟಿಯನ್ನು ಮತ್ತು ಅಂತರರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ (ಐಬಿಆರ್ಡಿ) ₹ 2,879.90 ಕೋಟಿಯನ್ನು ಸಾಲವಾಗಿ ನೀಡಲಿವೆ.
ಸಾಲವು 18.5 ವರ್ಷಗಳ ಮುಕ್ತಾಯ ಅವಧಿ (ಮೆಚ್ಯುರಿಟಿ ಪಿರಿಯಡ್) ಹೊಂದಿದ್ದು, ಐದು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಒಳಗೊಂಡಿದೆ.
ಸಾಂಕ್ರಾಮಿಕವು ಆರಂಭವಾದಾಗಿನಿಂದಲೂ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಲು ಭಾರತದ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸಲು ಒಟ್ಟಾರೆ ₹ 12,264.54 ಕೋಟಿ ಮೊತ್ತದ ನೆರವು ನೀಡಲಾಗಿದೆ ಎಂದು ಅದು ತಿಳಿಸಿದೆ.
ಬೀದಿ ಬದಿಯ ವ್ಯಾಪಾರಿಗಳು ಭಾರತದ ನಗರಗಳ ಅಸಂಘಟಿತ ಆರ್ಥಿಕತೆಯ ಭಾಗವಾಗಿದ್ದಾರೆ. ನ್ಯಾಷನಲ್ ಡಿಜಿಟಲ್ ಅರ್ಬನ್ ಮಿಷನ್ ಕಾರ್ಯಕ್ರಮವು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಬಡ್ಡಿ ದರಕ್ಕೆ ಗರಿಷ್ಠ ₹ 10 ಸಾವಿರದವರೆಗೆ ದುಡಿಯುವ ಬಂಡವಾಳದ ಸಾಲ ಒದಗಿಸಲಿದೆ. ನಗರ ಸ್ಥಳೀಯ ಸಂಸ್ಥೆಗಳು ಐ.ಟಿ. ಆಧಾರಿತ ವೇದಿಕೆಯ ಮೂಲಕ ಅವರನ್ನು ಗುರುತಿಸಲಾಗುತ್ತದೆ. ಹೊಸ ಸಾಲ ಕಾರ್ಯಕ್ರಮದಿಂದ ನಗರ ಪ್ರದೇಶಗಳ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದೆ.