ನವದೆಹಲಿ: ‘ಷೇರುಪೇಟೆಯ ವಹಿವಾಟಿನಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವಲ್ಲಿ ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
‘ನಿಫ್ಟಿ’ಯ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಆರ್ಥಿಕತೆಯ ಬೆಳವಣಿಗೆ ಜತೆಗೆ ದೇಶಿ ಆರ್ಥಿಕತೆಯು ಜಾಗತಿಕ ಆರ್ಥಿಕತೆ ಜತೆ ಹೆಚ್ಚು ಸಮನ್ವಯದಿಂದ ಕೆಲಸ ಮಾಡಲು ‘ಎನ್ಎಸ್ಇ’ ಮಹತ್ವದ ಕೊಡುಗೆ ನೀಡುತ್ತಿದೆ’ ಎಂದರು.
‘ಷೇರುಪೇಟೆಯಲ್ಲಿ ಕೌಟುಂಬಿಕ ಹೂಡಿಕೆಯು ಶ್ರೀಮಂತ ದೇಶಗಳಲ್ಲಿನ ಶೇ 40ರಷ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಕೇವಲ ಶೇ 2ರಷ್ಟಿದೆ. ಬಂಡವಾಳ ಪೇಟೆಯತ್ತ ಸಾಮಾನ್ಯ ಹೂಡಿಕೆದಾರರನ್ನು ಆಕರ್ಷಿಸಲು ‘ನಿಫ್ಟಿ’ ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದರು.