ಮುಂಬೈ: ವಹಿವಾಟಿನ ಅಂತ್ಯದಲ್ಲಿ ನಡೆದ ಖರೀದಿ ಭರಾಟೆ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 267 ಅಂಶಗಳಷ್ಟು ಚೇತರಿಕೆ ಕಂಡಿತು.
ಕೇಂದ್ರ ಸರ್ಕಾರವು ಬಹುತೇಕ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಹೆಚ್ಚಿಸಿದ್ದರಿಂದ ಬ್ಯಾಂಕ್ ಮತ್ತು ವಾಹನ ತಯಾರಿಕಾ ಸಂಸ್ಥೆಗಳ ಷೇರುಗಳಲ್ಲಿ ಖರೀದಿ ಆಸಕ್ತಿ ಹೆಚ್ಚಾಗಿ ಕಂಡು ಬಂದಿತು. ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಷೇರುಗಳೂ ಲಾಭ ಮಾಡಿಕೊಂಡವು. ಇದರಿಂದ ಸಂವೇದಿ ಸೂಚ್ಯಂಕವು ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತು.
‘ಗರಿಷ್ಠ ಪ್ರಮಾಣದ ‘ಎಂಎಸ್ಪಿ’ಯಿಂದಾಗಿ ಗ್ರಾಮೀಣ ಜನರ ಆದಾಯ ಮತ್ತು ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ದೇಶದಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ಗ್ರಾಹಕ ಬಳಕೆ ಸರಕುಗಳಿಗೆ ಸಂಬಂಧಿಸಿದ ತಯಾರಿಕಾ ಸಂಸ್ಥೆಗಳ ಷೇರುಗಳಿಗೆ ಬೇಡಿಕೆ ಹೆಚ್ಚಿದೆ’ ಎಂದು ಜಿಯೊಜೀತ್ ಫೈನಾನ್ಶಿಯಲ್ ಸರ್ವಿಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ವಿಶ್ಲೇಷಿಸಿದ್ದಾರೆ.
ಜಾಗತಿಕ ಪೇಟೆಗಳಲ್ಲಿನ ನಿರುತ್ಸಾಹದ ವಹಿವಾಟಿನಿಂದಾಗಿ ದಿನದ ಬಹುತೇಕ ಸಮಯದಲ್ಲಿ ಸೂಚ್ಯಂಕವು ಕೆಳಮಟ್ಟದಲ್ಲಿಯೇ ಇತ್ತು. ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿ ಆಸಕ್ತಿ ಮತ್ತು ಜೂನ್ ತಿಂಗಳ ಸೇವಾ ವಲಯದ ಚೇತರಿಕೆಯು ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿತು.
ದಿನದ ಅಂತ್ಯಕ್ಕೆ ಸೂಚ್ಯಂಕವು 267 ಅಂಶಗಳಷ್ಟು ಏರಿಕೆ ದಾಖಲಿಸಿ 35,645 ಅಂಶಗಳಿಗೆ ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) 70 ಅಂಶಗಳ ಏರಿಕೆ ಕಂಡು 10,769 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
* ಮಂಗಳವಾರದ ವಹಿವಾಟಿನಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿದ ಷೇರುಗಳ ಮೊತ್ತ₹ 279 ಕೋಟಿ
* ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ ಷೇರುಗಳ ಮೊತ್ತ₹ 1,043 ಕೋಟಿ
ಕೃಷಿ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳ ಷೇರು ಗಳಿಕೆ
ಕೃಷಿ ಕ್ಷೇತ್ರದಲ್ಲಿನ ಸಂಸ್ಥೆಗಳ ಷೇರುಗಳು ಗರಿಷ್ಠ ಶೇ 13ರಷ್ಟು ಏರಿಕೆ ಕಂಡವು. ಕೊಹಿನೂರ್ ಫುಡ್ಸ್ (ಶೇ 12.96), ಎಲ್ಟಿ ಫುಡ್ಸ್ (ಶೇ 7.01) ಮತ್ತು ಚಮನ್ಲಾಲ್ ಸೇಟಿಯಾ ಎಕ್ಸ್ಪೋರ್ಟ್ಸ್ ಷೇರುಗಳ ಬೆಲೆ ಶೇ 2.27ರಷ್ಟು ಹೆಚ್ಚಳ ದಾಖಲಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.