ನವದೆಹಲಿ(ಪಿಟಿಐ): ಚಿಕ್ಕ ನಗರಗಳಲ್ಲಿಯೂ ಗಾರ್ಮೆಂಟ್ಸ್(ಸಿದ್ಧ ಉಡುಪು) ಉದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ನೀಲನಕ್ಷೆಯೊಂದನ್ನು ಸಿದ್ಧಪಡಿಸಿದೆ. ಸಿದ್ಧ ಉಡುಪು ಉದ್ಯಮದಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ತರಬೇತಿ, ಹೆಚ್ಚು ಉದ್ಯೋಗಾವಕಾಶ ಸೃಷ್ಟಿ ಈ ಯೋಜನೆಯ ಪ್ರಮುಖ ಅಂಶಗಳು.
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಉನ್ನತಾಧಿಕಾರದ ಸಚಿವರ ಸಮಿತಿ ಇತ್ತೀಚೆಗೆ ಈ ಪ್ರಸ್ತಾವವನ್ನು ಪರಿಶೀಲಿಸಿದೆ. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ `ರಾಷ್ಟ್ರೀಯ ತಯಾರಿಕಾ ಸ್ಪರ್ಧಾತ್ಮಕ ಮಂಡಳಿ'(ಎನ್ಎಂಸಿಸಿ) ನೀಡಿದ ಸಲಹೆಗಳನ್ನೂ ಸಮಿತಿ ಪರಿಶೀಲಿಸಿದೆ.
ಚಿಕ್ಕ ನಗರಗಳಲ್ಲಿ ಸಿದ್ಧ ಉಡುಪು ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬರುವುದರಿಂದ ಉದ್ಯೋಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತೂ ಚರ್ಚೆ ನಡೆದಿದೆ. ಜಾಗತಿಕ ಮಾರುಕಟ್ಟೆ ಜತೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ರಫ್ತು ಗುಣಮಟ್ಟದ ಉಡುಪುಗಳಿಗೆ ಮಾನದಂಡವನ್ನೂ ನಿಗದಿಪಡಿಸಲಾಗಿದೆ.